ಸಿಧು ಮೂಸೆವಾಲ ಹತ್ಯೆ ಪ್ರಕರಣ – ದುಬೈನಲ್ಲಿ ತಲೆ ಮರೆಸಿಕೊಡಿದ್ದ ಆರೋಪಿಯನ್ನು ಬಂಧಿಸಿದ ಎನ್‍ಐಎ

Public TV
2 Min Read
Vikram Brar

ನವದೆಹಲಿ: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಎನ್‍ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಬಂಧಿಸಿದೆ. ದುಬೈನಿಂದ (Dubai) ದರೋಡೆಕೋರ ವಿಕ್ರಮ್ ಬ್ರಾರ್‌ನ್ನು ಹಸ್ತಾಂತರಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರಲು ಎನ್‍ಐಎ (NIA )ತಂಡ ದುಬೈಗೆ ತೆರಳಿತ್ತು.

ಆರೋಪಿ ವಿಕ್ರಮ್ ಬ್ರಾರ್ ನಟ ಸಲ್ಮಾನ್ ಖಾನ್‍ಗೆ ಸಹ ಬೆದರಿಕೆ ಒಡ್ಡಿದ್ದ. ಅಲ್ಲದೇ ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಎನ್ನಲಾಗಿದೆ. ಮೂಸೆವಾಲಾ ಹತ್ಯೆಯಲ್ಲಿ ವಿಕ್ರಮ್ ಬ್ರಾರ್‌ನ ಕೈವಾಡವಿದೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅಲ್ಲದೇ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ಇತರರ ಸಹಾಯದಿಂದ ಉದ್ಯಮಿಗಳ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಆತ ಸಂಪರ್ಕ ಹೊಂದಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳ ನಡುವೆ ಘರ್ಷಣೆ – ಜೈಲಿನಲ್ಲೇ ಇಬ್ಬರ ಸಾವು!

ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳ ಪೊಲೀಸರ ಮನವಿ ಮೇಲೆ ದರೋಡೆಕೋರ ವಿಕ್ರಮ್ ಬ್ರಾರ್ ವಿರುದ್ಧ 11 ಲುಕ್‍ಔಟ್ ನೋಟಿಸ್‍ಗಳನ್ನು ಹೊರಡಿಸಲಾಗಿತ್ತು. ಆತ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಆಜ್ಞೆಯ ಮೇರೆಗೆ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದ. ಅಲ್ಲದೇ ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‍ನಲ್ಲಿ ನಡೆದ ಹಲವಾರು ಕೊಲೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್‍ಗೆ ವಿಕ್ರಮ್ ಬ್ರಾರ್ ಸಹಾಯ ಮಾಡಿದ್ದಾನೆ ಎಂದು ಎನ್‍ಐಎ ಹೇಳಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯರಿಗೆ ಬಂದೂಕು ಸರಬರಾಜು ಮಾಡುವಲ್ಲಿಯೂ ಈತ ಭಾಗಿಯಾಗಿದ್ದ. ತಲೆ ಮರೆಸಿಕೊಂಡಿದ್ದ ವಿಕ್ರಮ್ ಬ್ರಾರ್‌ಗಾಗಿ ಬಹಳ ಸಮಯದಿಂದ ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ಆತನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಇದನ್ನೂ ಓದಿ: ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

Web Stories

Share This Article