ಹುಬ್ಬಳ್ಳಿ: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಅಕ್ಕಿ ಫೈಟ್ ಜೋರಾಗುತ್ತಿದೆ. ಕೇಂದ್ರದ ಅಕ್ಕಿ ಬೇಕಿದ್ರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡಬೇಕು. ಕೇಂದ್ರದಿಂದ ನಮಗೆ ಸಾಧ್ಯವಿರುವ ಎಲ್ಲಾ ಸಹಕಾರ ಕೊಡುತ್ತೇವೆ. ಟೆಂಡರ್ ಕರೆದು ಕೇಂದ್ರ ಸರ್ಕಾರ (Central Government) ಅಕ್ಕಿ ಖರೀದಿ ಮಾಡುತ್ತದೆ. ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Prlhad Joshi) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಂದ್ರದಿಂದ ಈಗಾಗಲೇ ದೇಶಾದ್ಯಂತ 5 ಕೆ.ಜಿ ಅಕ್ಕಿ (Ration) ಕೊಡುತ್ತಿದ್ದೇವೆ. ನಮ್ಮದು ಬಿಟ್ಟು ಸಿಎಂ 10 ಕೆ.ಜಿ ಅಕ್ಕಿ ಕೊಡ್ತಾರಾ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಬಿಜೆಪಿ (BJP) ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ಸೇರಿಸಿ ಎಲ್ಲರಿಗೂ ಒಂದೇ ಕಾನೂನು ಇದೆ. ಬಫರ್ ಸ್ಟಾಕ್ನ್ನು ನಾವು ಇಟ್ಟುಕೊಳ್ಳಬೇಕಾಗುತ್ತೆ ಎಂದು ಹೇಳಿದರು.
ರಾಜ್ಯ ಸರ್ಕಾರ ವಿದ್ಯುತ್ ದರ (Electricity Bill) ಏರಿಸಿ ಜನರಿಗೆ ತೊಂದರೆ ಕೊಡುತ್ತಿದೆ. ಇಂಡಸ್ಟ್ರಿಗಳನ್ನು ಓಡಿಸುತ್ತಿದ್ದೀರಿ, ವ್ಯವಹಾರ ಮಾಡಲು ಬಿಡುತ್ತಿಲ್ಲ. ಕೈಗಾರಿಕೆಗಳ ಮೇಲೆ ಯಾಕೆ ಭಾರ ಹಾಕಿದ್ದೀರಿ?. ಜನರಿಗೆ ಭಾಗ್ಯಗಳ ಹೆಸರಲ್ಲಿ ಮೋಸ ಮಾಡಿ ಕಂಡೀಷನ್ ಹಾಕುತ್ತಿದ್ದಾರೆ. ನಾವು ಕಾಂಗ್ರೆಸ್ (Congress) ಗೆ ಅಚ್ಛೆ ದಿನ್ ಬರುತ್ತೆ ಅಂತಾ ಹೇಳಿಲ್ಲ ಎಂದರು. ಇದನ್ನೂ ಓದಿ: ಜುಲೈನಲ್ಲಿ ಮಂಡಿಸೋ ಬಜೆಟ್ ಗಾತ್ರ 30-35 ಸಾವಿರ ಕೋಟಿ ಹೆಚ್ಚಳ ಆಗುತ್ತೆ: ಸಿದ್ದರಾಮಯ್ಯ
ಇಡೀ ದೇಶಕ್ಕೆ ಅಚ್ಛೇ ದಿನ್ ಬರುತ್ತೆ ಅಂತಾ ಹೇಳಿದ್ವಿ. ದೇಶದಲ್ಲಿ ಆಹಾರ ಭದ್ರತೆ ಇದೆ, ಹಣದುಬ್ಬರ ಕಡಿಮೆಯಾಗಿದೆ. ಕೋವಿಡ್, ರಷ್ಯಾ- ಉಕ್ರೇನ್ ಯುದ್ಧದ ನಡುವೆಯೂ ದೇಶ ಆರ್ಥಿಕವಾಗಿ ಸುಸ್ಥಿರವಾಗಿದೆ. ಇಡೀ ದೇಶದಲ್ಲಿ ಮೋದಿಯವರ ಬಗ್ಗೆ ಗೌರವವಿದೆ. ಸಿದ್ದರಾಮಯ್ಯ ಸುಳ್ಳು ಭಾಷಣ ಮಾಡುವುದರಿಂದ ಏನೂ ಆಗಲ್ಲ ಎಂದು ತಿಳಿಸಿದರು.