ಶೃಂಗೇರಿಯಿಂದ ಪಂಚಲೋಹ ಮೂರ್ತಿ ರವಾನೆ – 75 ವರ್ಷಗಳ ಬಳಿಕ ಕಾಶ್ಮೀರದ ಶಾರದಾಂಬೆ ದೇಗುಲದಲ್ಲಿ ಪೂಜೆ

Public TV
2 Min Read
Kashmir Sringeri Sharadamba Temple

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇಗುಲದ (Sringeri Sharadamba Temple) ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಶ್ರೀಗಳು ಕಾಶ್ಮೀರದ (Kashmir) ತಿತ್ವಾಲ್‌ಗೆ (Titwal) ಭೇಟಿ ನೀಡಿದ್ದಾರೆ.

ಶತಮಾನಗಳ ಹಿಂದೆ ಶಂಕರಾಚಾರ್ಯರು ಕಾಶ್ಮೀರದ ತಿತ್ವಾಲ್‌ನಲ್ಲಿ ಸ್ಥಾಪಿಸಿದ್ದ ಶಾರದಾಂಬೆ ದೇಗುಲ 1948ರಲ್ಲಿ ಸಂಪೂರ್ಣ ಹಾಳಾಗಿತ್ತು. ಕಾಶ್ಮೀರಿ ಪಂಡಿತರು 2-3 ಬಾರಿ ಶೃಂಗೇರಿಗೆ ಭೇಟಿ ನೀಡಿ, ಕಾಶ್ಮೀರದ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಕಾಶ್ಮೀರಿ ಪಂಡಿತರ ಮನವಿಯಂತೆ ಶೃಂಗೇರಿ ಜಗದ್ಗುರುಗಳು ತಿತ್ವಾಲ್‌ನಲ್ಲಿ ಶೃಂಗೇರಿ ಶಾರದಾಂಬೆಯ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕಾರ ನೀಡಿದ್ದರು. ಅದರಂತೆ ಶೃಂಗೇರಿಯಿಂದಲೇ ಪಂಚಲೋಹದ ಶಾರದಾಂಬೆ ಮೂರ್ತಿ ನಿರ್ಮಾಣಗೊಂಡು ಕಾಶ್ಮೀರ ತಲುಪಿದೆ.

Kashmir Sringeri Sharadamba Temple 2

ಇದೇ ಜನವರಿ 24ರಂದು ಶೃಂಗೇರಿಯಿಂದ ಹೊರಟ ಶಾರದಾಂಬೆ ವಿಗ್ರಹದ ರಥಯಾತ್ರೆಗೆ ಚಾಲನೆ ನೀಡಿದ್ದರು. 4,000 ಕಿ.ಮೀ ದೂರದ ತಿತ್ವಾಲ್‌ನಲ್ಲಿನ ಶೃಂಗೇರಿ ಶಾರದಾಂಬೆಗೆ ಸೋಮವಾರ ಶೃಂಗೇರಿಯ ಕಿರಿಯ ಶ್ರೀಗಳಾದ ವಿಧುಶೇಖರ ಶ್ರೀಗಳು ಪೂಜೆ ಸಲ್ಲಿಸಲಿದ್ದಾರೆ.

Kashmir Sringeri Sharadamba Temple 3

ವಿಶೇಷ ವಿಮಾನದ ಮೂಲಕ ಕಾಶ್ಮೀರಕ್ಕೆ ಭೇಟಿ ನೀಡಿರುವ ವಿಧುಶೇಖರ ಶ್ರೀಗಳು ಅಲ್ಲಿಂದ ಕಾರಿನ ಮೂಲಕ ತಿತ್ವಾಲ್‌ನಲ್ಲಿನ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇಂದು ವಿಧುಶೇಖರ ಶ್ರೀಗಳು ಶಾರದಾಂಬೆ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆ. ವಿಧುಶೇಖರ ಶ್ರೀಗಳನ್ನು ಕಾಶ್ಮೀರಿ ಪಂಡಿತರಾದ ರವೀಂದ್ರ ಪಂಡಿತ್, ಪುರೋಹಿತ ಮೋಕಾಶಿ, ರವೀಂದ್ರ ಟಿಕ್ಕು ಮೋತಿಲಾಲ್ ಪೂರ್ಣಕುಂಭದ ಮೂಲಕ ಬರಮಾಡಿಕೊಂಡರು. ಇದನ್ನೂ ಓದಿ: ಗ್ಯಾರಂಟಿ ಜಾರಿಗೆ ಇಂದೇ ಗೈಡ್‍ಲೈನ್ಸ್- ಉಚಿತ ವಿದ್ಯುತ್ ಗ್ಯಾರಂಟಿ ಬಗ್ಗೆ ಮಾರ್ಗಸೂಚಿ?

Kashmir Sringeri Sharadamba Temple 1

ಶಾರದಾಂಬೆ ವಿಗ್ರಹದ ಪುನರ್ ಪ್ರತಿಷ್ಠಾಪನೆಗೆ ಶೃಂಗೇರಿ ಮಠದಿಂದಲೇ ಋತ್ವಿಜರ ತಂಡವನ್ನು ಕಳಿಸಲಾಗಿದೆ. ವಾಸ್ತುಹೋಮ, ಕಲಾ ಹೋಮ ಸೇರಿದಂತೆ ತಿತ್ವಾಲ್‌ನ ಶಾರದಾಂಬೆ ದೇಗುಲದಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡು ವಿಧುಶೇಖರ ಶ್ರೀಗಳ ಸಮ್ಮುಖದಲ್ಲಿ ಶಾರದಾಂಬೆ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಹಾಗೂ ಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.

ದೇಶದ ತುದಿ ಹಾಗೂ ಗಡಿಯಲ್ಲಿ 75 ವರ್ಷಗಳ ಬಳಿಕ ಶಾರದಾಂಬೆ ದೇಗುಲ ಪುನರ್ ಪ್ರತಿಷ್ಠಾಪನೆಯಾಗಿರುವುದು ಐತಿಹಾಸಿಕ ಘಟನೆ ಎಂದು ಶಾರದಾಂಬೆ ಭಕ್ತರು ಹಾಗೂ ಹಿಂದೂ ಸಮುದಾಯ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಅಭಿಷೇಕ್ ಮದುವೆಗೆ ಬಂದು ಶುಭ ಹಾರೈಸಿದ ರಜನಿಕಾಂತ್

Share This Article