– ಧಗ ಧಗನೆ ಹೊತ್ತಿ ಉರಿದ ಲಘು ವಿಮಾನ, ಇಬ್ಬರೂ ಪೈಲಟ್ ಸೇಫ್
ಚಾಮರಾಜನಗರ: ತಾಲೂಕಿನ ಹೆಚ್.ಮೂಕಳ್ಳಿ ಬಳಿಯ ಭೋಗಪುರದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ಲಘು ವಿಮಾನ (Jet Crash) ಪತನಗೊಂಡು ಧಗ ಧಗನೆ ಹೊತ್ತಿ ಉರಿದಿತ್ತು. ಇದಕ್ಕೆ ತಾಂತ್ರಿಕ ದೋಷವೇ (Technical Fault) ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ HAL ನಿಂದ ಹೊರಟಿದ್ದ ಲಘು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡಿತ್ತು. ವಿಮಾನ ಅಪಘಾತದ ಸುಳಿಗೆ ಸಿಲುಕುತ್ತಿದ್ದಂತೆ ಇಬ್ಬರು ಪೈಲಟ್ಗಳು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್ಎಎಲ್ನ ಸೇನಾ ಹೆಲಿಕಾಪ್ಟರ್ಗಳು ಪೈಲಟ್ಗಳಾದ ತೇಜ್ ಪಾಲ್ ಹಾಗೂ ಭೂಮಿಕಾ ಇಬ್ಬರನ್ನೂ ಏರ್ಲಿಫ್ಟ್ ಮೂಲಕ ರವಾನೆ ಮಾಡಿದ್ದರು. ಇಬ್ಬರಿಗೂ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ವಿಂಗ್ ಕಮಾಂಡರ್ ತೇಜ್ಪಾಲ್ ತರಬೇತುದಾರರಾಗಿದ್ದು, ಭೂಮಿಕಾ ತರಬೇತಿ ಪಡೆಯುತ್ತಿದ್ದ ಪೈಲಟ್. ಮಧ್ಯಾಹ್ನ 12:20ರ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ವಿಮಾನ ಪತನಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದೆವು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಹಾಗೂ ಅಗ್ನಿಶಾಮಕ ದಳ ಮುಖ್ಯ ಅಧಿಕಾರಿ ಜಯರಾಮ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಏರ್ಮಾರ್ಷಲ್ ಅಧಿಕಾರಿಗಳು, ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಲಘು ವಿಮಾನ ದುರಂತ ನಡೆದ ಸ್ಥಳಕ್ಕೂ ಪೈಲಟ್ ಬಿದ್ದಿದ್ದ ಸ್ಥಳಕ್ಕೂ 2 ಕಿಮೀ ಅಂತರವಿತ್ತು ಎಂದು ಹೇಳಿದ್ದಾರೆ, ಈ ಬಗ್ಗೆ ತನಿಖೆ ಮುಂದುವರಿದೆ.