ಬೆಳಗಾವಿ: ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಸುಳ್ಳು ಹೇಳಬೇಡಿ ಅಂತಾ ನಮಗೆ ವಾರ್ನಿಂಗ್ ಮಾಡಿದ್ದಾರೆ. ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬರುವುದಕ್ಕಿಂತ ವಿಪಕ್ಷದಲ್ಲಿ ಇರುವುದು ಒಳ್ಳೆಯದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದರು.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಈ ತಿಂಗಳ ಅಂತ್ಯದಲ್ಲಿ ಚುನಾವಣೆ (Election) ಘೋಷಣೆ ಆಗುತ್ತದೆ. ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಹೊಸ ಸರ್ಕಾರ ರಚನೆ ಆಗುತ್ತದೆ. ನೂರಕ್ಕೆ ನೂರು ಬಿಜೆಪಿ (BJP) ಸರ್ಕಾರ ಆಗೋದು ಶತಸಿದ್ಧ. ಕಾಂಗ್ರೆಸ್ನವರು ಏನೇ ಹೇಳಲಿ, ಏನೇ ಗ್ಯಾರಂಟಿ ಕಾರ್ಡ್ ಕೊಡಲಿ. ಬಹಳ ಅಂದ್ರೆ ಅವರು 10 ಕೆಜಿ ಅಕ್ಕಿ ಫ್ರೀ ಕೊಡಬಹುದು. ಅದನ್ನ ಕೇಂದ್ರ ಸರ್ಕಾರ ಕೊಡುತ್ತದೆ. ಹೀಗಾಗಿ ಕೊಡಬಹುದು. ಆದರೆ 200 ಯೂನಿಟ್ ಫ್ರೀ ವಿದ್ಯುತ್, 2 ಸಾವಿರ ಹಣ ನೀಡಲು ಸಾಧ್ಯವಿಲ್ಲ. ಚುನಾವಣೆ ಬಂದರೆ ಅವರು ಸುಳ್ಳು ಹೇಳುತ್ತಾರೆ ಎಂದರು.
ಸ್ವಯಂಘೋಷಿತ ನಾಯಕಿ, ಸ್ವಯಂಘೋಷಿತ ಲೀಡರ್ ಗ್ಯಾರಂಟಿ ಕಾರ್ಡ್ ಕೊಡ್ತಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಸುಳ್ಳು ಹೇಳಿ ಏನೂ ಮಾಡಲು ಸಾಧ್ಯವಿಲ್ಲ. ನಾನು ಮೊದಲ ಬಾರಿ ಶಾಸಕನಾದಾಗ ಕುಂದರನಾಡಿನಲ್ಲಿ ನೀರು ತರಲು ಡ್ಯಾಂಗೆ ಹೋಗುತ್ತಿದ್ದರು ಎಂದರು.
ಕೆಮಿಕಲ್ ಮಿಶ್ರಿತ ನೀರು ಕುಡಿದು ಆರೋಗ್ಯ ಸಮಸ್ಯೆ ಎದುರಾಗುತ್ತಿತ್ತು. 1924ರಲ್ಲಿ ಬ್ರಿಟಿಷರು ಸರ್ವೇ ಮಾಡಿದ್ದ ಶಿರೂರು ಡ್ಯಾಂ ಹೆಚ್ಚು ಒತ್ತು ಕೊಟ್ಟಿದ್ದೇನೆ. ಆಗ ಎಸ್.ಎಂ.ಕೃಷ್ಣ ಸಿಎಂ ಹಾಗೂ ಹೆಚ್.ಕೆ.ಪಾಟೀಲ್ ಜಲಸಂಪನ್ಮೂಲ ಸಚಿವರಿದ್ದರು. ಆಗ ನಾನು ಅವರ ಬಳಿ ಹೋಗಿ ನೀರಾವರಿ ಯೋಜನೆಗೆ ಮನವಿ ಮಾಡಿದ್ದೇನೆ. ನೀರಾವರಿ, ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಗೋಕಾಕ್ ಅಭಿವೃದ್ಧಿ ಮಾಡಿ ಮಾದರಿಯನ್ನಾಗಿ ಮಾಡಿದ್ದೇನೆ. ನಾನು ಸಚಿವನಾಗಿದ್ದ ಬಹಳಷ್ಟು ಯೋಜನೆಗಳಿಗೆ ಒತ್ತು ಕೊಟ್ಟಿದ್ದೇನೆ. ಆದರೆ ದುರ್ದೈವ ವಿರೋಧಿಗಳ ಷಡ್ಯಂತ್ರದಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
2023ಕ್ಕೆ ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಮಾಡ್ತೇವೆ. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡಕ್ಕೆ ಕೊಡಲ್ಲ. ಹೇಗಾದರೂ ಮಾಡಿ ಸರ್ಕಾರ ಮಾಡುತ್ತೇವೆ. ನಾನು ಬಿಜೆಪಿ ಸರ್ಕಾರ ತರಲು ಶಪಥ ಮಾಡಿದ್ದೇನೆ. ಪೂರ್ಣ ಪ್ರಮಾಣದಲ್ಲಿ ಬಿಜೆಪಿಗೆ ಬಹುಮತ ಬರುತ್ತದೆ ಎಂದು ನಂಬಿಕೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು
2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ. ದೊಡ್ಡಣ್ಣ ಅಮೆರಿಕ ಸೈಡ್ ಹೊಡೆದು ಕೆಲವೇ ದಿನಗಳಲ್ಲಿ ಆ ಕೀರ್ತಿ ಭಾರತಕ್ಕೆ ಬರುವ ದಿನ ಬಹಳ ದೂರ ಇಲ್ಲ. 2001ರಲ್ಲಿ ಅಮೆರಿಕಕ್ಕೆ ಹೋದಾಗ ಚೆಕಿಂಗ್ಗೆ ಒಂದೆರಡು ಗಂಟೆ ನಿಲ್ಲಿಸುತ್ತಿದ್ದರು. ಈಗ ನಮ್ಮನ್ನು ಒಂದು ನಿಮಿಷದಲ್ಲಿ ಕಳಿಸುತ್ತಾರೆ. ಪ್ರಧಾನಿ ಮೋದಿ ಆಡಳಿತ ಮೆಚ್ಚಿ ಬೇರೆ ದೇಶದವರು ನಾವು ದೊಡ್ಡಣ್ಣ ಆಗಲು ಅರ್ಹರು ಎಂದು ಒಪ್ಪುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಿಂದ ಕ್ಷೇತ್ರವಾರು ಸಮಾವೇಶ ಮಾಡುತ್ತಿದ್ದೇವೆ. ಮಾ.25ರೊಳಗೆ ಗೋಕಾಕ್ನಲ್ಲಿ 1 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ. ಮಾ. 25ರೊಳಗೆ ಒಂದು ಲಕ್ಷ ಜನರ ಸೇರಿಸಿ ಸಮಾವೇಶ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು