ಮೋದಿ ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಲು ಇಲ್ಲಿದೆ ಪ್ರಮುಖ ಕಾರಣಗಳು!
ನವದೆಹಲಿ: ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದು ರೈತರಿಗೆ ಸಿಹಿ ಸುದ್ದಿ ನೀಡಿದೆ. ಈ ನಡುವೆ ಮೋದಿ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆದಿದ್ದೇಕೆ ಎಂಬ ಪ್ರಶ್ನೆ ಕೂಡ ಮನೆಮಾಡಿದ್ದು, ಇದಕ್ಕೆ ಈ ಕಾರಣಗಳು ಪ್ರಮುಖವಾಗಿ ಗೋಚರಿಸುತ್ತಿದೆ.
ಕೇಂದ್ರ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು 2020ರ ಸಪ್ಟೆಂಬರ್ 17 ರಂದು ಜಾರಿಗೊಳಿಸಿತ್ತು. ಈ ಕಾಯ್ದೆಗಳು ಜಾರಿಗೊಳಿಸುತ್ತಿದ್ದಂತೆ ರೈತರು ಈ ಮಸೂದೆ ವಿರುದ್ಧ ಪ್ರತಿಭಟನೆಗೆ ಮುಂದಾದರು. 2020 ನವೆಂಬರ್ 26 ರಿಂದ ಸಂಘು ಗಡಿ, ಟೆಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಮಸೂದೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸಮಜಾಯಿಷಿ ನೀಡಿದರು ಕೂಡ ತಮ್ಮ ಪಟ್ಟು ಸಡಿಲಗೊಳಿಸದೆ ಪ್ರತಿಭಟನೆ ಮುಂದುವರಿಸಿದ್ದರು.
ಪ್ರಮುಖ ಕಾರಣಗಳು:
ಇದೀಗ ಕೇಂದ್ರ ಸರ್ಕಾರದ ಮುಂದಿರುವ ಪ್ರಮುಖ ಕಾರಣವನ್ನು ಮನವರಿಗೆ ಮಾಡಿಕೊಂಡು ಈ ಮಸೂದೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ, ಉತ್ತರಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿರುವ ಬಗ್ಗೆ ಸುಳಿವು. ಕಳೆದ ಚುನಾವಣೆಗಿಂತ ಈ ಬಾರಿ 100ಕ್ಕೂ ಅಧಿಕ ಸ್ಥಾನ ಕಳೆದುಕೊಳ್ಳುವ ಸುಳಿವು. ಮತಗಳಿಕೆ ಪ್ರಮಾಣದಲ್ಲೂ ಬಿಜೆಪಿಗೆ ಹಿನ್ನಡೆ ಆಗಬಹುದು ಎಂಬ ಲೆಕ್ಕಾಚಾರ ಮತ್ತು ಉತ್ತರಪ್ರದೇಶ ಹಲವು ಭಾಗಗಳಲ್ಲಿ ರೈತ ಹೋರಾಟದ ನೇರ ಪರಿಣಾಮ ಆತಂಕ ಮೂಡಿಸಿತ್ತು. ಈ ಪ್ರಮುಖ 5 ಕಾರಣಗಳು ಕೇಂದ್ರದ ಮುಂದೆ ಸವಾಲಾಗಿತ್ತು. ಹಾಗಾಗಿ ಈ ನಿರ್ಧಾರ ಕೈಗೊಂಡಿದೆ.
ಉತ್ತರ ಪ್ರದೇಶ, ಪಂಜಾಬ್ ಚುನಾವಣೆ:
ಇತ್ತಿಚೇಗಷ್ಟೆ ದೇಶದಾದ್ಯಂತ ಮುಕ್ತಾಯವಾದ ಉಪಚುನಾವಣೆಯಲ್ಲಿ ಬಿಜೆಪಿ ಸಣ್ಣ ಮಟ್ಟಿನ ಹಿನ್ನೆಡೆಯನ್ನು ಅನುಭವಿಸಿತ್ತು. ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿ ಪಂಚರಾಜ್ಯಗಳಲ್ಲಿ ವಿಧಾನ ಸಭಾಚುನಾವಣೆ ನಡೆಯಲಿದೆ. ಹಾಗಾಗಿ ಉಪಚುನಾವಣೆಯ ಹಿನ್ನಡೆಯಿಂದ ಎಚ್ಚೆತ್ತು ಮುಂದಿನ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ಲಾನ್:
ಮುಂದಿನ ವಿಧಾನಸಭಾ ಚುನಾವಣೆಯ ಜೊತೆಗೆ ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರ ಮನಗೆಲ್ಲುವುದು ಪ್ರಧಾನಿ ಮೋದಿ ಅವರಿಗೆ ಅನಿವಾರ್ಯ ಎನಿಸುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದ ಮೂಲೆ ಮೂಲೆಯಿಂದ ರೈತರು ಮೋದಿ ಸರ್ಕಾರದ ಈ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರೈತರು ಹೋರಾಟದ ಹಾದಿಯನ್ನು ಕೈ ಬಿಡುವ ಲಕ್ಷಣಗಳು ಕಾಣಿಸದೆ ಇದ್ದಾಗ ರೈತರನ್ನು ಎದುರು ಹಾಕಿಕೊಂಡರೆ ಭವಿಷ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಹೊಡೆತ ಬೀಳಬಹುದು ಎನ್ನುವ ಮುನ್ನೆಚ್ಚರಿಕೆಯನ್ನು ಪಡೆದು ಎಚ್ಚರಿಕೆಯಿಂದ ಮುನ್ನುಗ್ಗುವ ಪ್ರಯತ್ನಕ್ಕೆ ಮುಂದಾದ್ರು ಎನ್ನಲಾಗುತ್ತಿದೆ.
ಪಟ್ಟು ಬಿಡದ ರೈತರು:
ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ಜಾರಿಗೆ ತಂದೊಡನೆ, ರೈತರೊಂದಿಗೆ ವಿಪಕ್ಷಗಳು ಕೂಡ ಈ ಮಹತ್ವಾಕಾಂಕ್ಷೆಯ ಮೂರು ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಬರ ಬರುತ್ತ ವಿಪಕ್ಷಗಳು ಸುಮ್ಮನಾದವು. ಆದರೆ ಇನ್ನೊಂದೆಡೆ ರೈತರು ಮಾತ್ರ ಈ ಮಸೂದೆ ವಿರುದ್ಧ ಹೋರಾಟ ನಿಲ್ಲಿಸಲಿಲ್ಲ. ಗಡಿಪ್ರದೇಶದಲ್ಲಿ ಮತ್ತು ರಸ್ತೆಗಿಳಿದು ಪ್ರತಿಭಟನೆ ಮುಂದುವರಿಸುತ್ತಿದ್ದರು. ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ಮುಮದುವರಿಸಿರುವುದನ್ನು ಗಮನಿಸಿದ ಮೋದಿ ಪ್ರತಿಭಟನೆಗೆ ಮಣಿದು ಕಾಯ್ದೆ ಹಿಂಪಡೆಯಲು ತೀರ್ಮಾನಿಸಿದಂತಿದೆ.
ಕೃಷಿ ಮಸೂದೆ, ನರೇಂದ್ರ ಮೋದಿ, ಕೇಂದ್ರ ಸರ್ಕಾರ, ರೈತರು