ಚಂಡೀಗಢ: ವಿಷಯುಕ್ತ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿದ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಮುಖಂಡ ಮತ್ತು ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕನ ಪುತ್ರರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಯಮುನಾ ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಪೊಲೀಸರು ದಾಳಿ ನಡೆಸಿ ಕಾರ್ಖಾನೆ ಒಂದರಲ್ಲಿ ತಯಾರಿಸಿದ್ದ 200 ಕ್ರೇಟ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಜನ ಸಾವಿಗೀಡಾದ ಪ್ರದೇಶಗಳಿಗೆ ಇದೇ ಮದ್ಯ ಸರಬರಾಜಾಗಿದೆ ಎಂಬುದು ಖಚಿತವಾಗಿದೆ. ದಾಳಿ ನಡೆಸಿದ ವೇಳೆ 14 ಖಾಲಿ ಡ್ರಮ್ಗಳು ಮತ್ತು ಅಕ್ರಮ ಮದ್ಯ ತಯಾರಿಸಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್ಟೇಬಲ್
ಮದ್ಯ ದಂಧೆಕೋರರ ವಿರುದ್ಧ ದನಿ ಎತ್ತಲು ನಮಗೆ ಜೀವ ಭಯವಿದೆ ಎಂದು ಕೆಲವು ಗ್ರಾಮಸ್ಥರು ಮಾಹಿತಿ ನೀಡಲು ಹಿಂಜರಿದಿದ್ದಾರೆ. ಜನ ಸಾವಿಗೀಡಾದ ನಂತರ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ರಾಜಕೀಯ ಪಕ್ಷಗಳು ಸಹ ಬೆಂಬಲ ಸೂಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದವು.
ಪೊಲೀಸರು ಇದುವರೆಗೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣದ ತನಿಖೆಗಾಗಿ ಯಮುನಾನಗರ ಪೊಲೀಸರು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದಾರೆ. ಇದನ್ನೂ ಓದಿ: ಮತ್ತೆ ಚರ್ಚೆಯಲ್ಲಿ ಏಕರೂಪ ನಾಗರಿಕ ಸಂಹಿತೆ – ಉತ್ತರಾಖಂಡದಲ್ಲಿ ಮೊದಲು ಕಾನೂನು ಜಾರಿಗೆ ಸಿದ್ಧತೆ