ಹಾಸನ: ಹಾಸನಾಂಬೆ (Hasanamba) ದೇವಿ ದರ್ಶನಕ್ಕೆ ಆಗಮಿಸಿದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಲಾಪೂರ (R.B Timmapur) ಅವರಿಗೆ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಒಬ್ಬರು ತಡೆಯೊಡಿದ್ದ ಪ್ರಸಂಗ ದೇಗುಲದಲ್ಲಿ ನಡೆದಿದೆ.
ದೇವಾಲಯದ ಮುಂಭಾಗ ವಿವಿಐಪಿ ಪಾಸ್ ಹಿಡಿದು ಸಾವಿರಾರು ಭಕ್ತರು ನಿಂತಿದ್ದು, ಜನ ಹೆಚ್ಚಾಗುತ್ತಿದ್ದಂತೆ ಭಕ್ತರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಸಚಿವರು ದೇವಾಲಯದ ಬಳಿ ಬರಲಾಗದೆ ಅರ್ಧಗಂಟೆ ಕಾರಿನಲ್ಲೇ ಕುಳಿತಿದ್ದಾರೆ. ಬಳಿಕ ಸಚಿವರು ದೇವಾಲಯದ ಗರ್ಭಗುಡಿ ಬಳಿ ತಲುಪಿದ್ದು ಈ ವೇಳೆ ಮಹಿಳಾ ಪೊಲೀಸ್ (Police) ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಆಯ್ಕೆಯಿಂದ ಆಕಾಂಕ್ಷಿಗಳಿಗೆ ನಿರಾಸೆ ಸಹಜ: ಶ್ರೀರಾಮುಲು
ಬಳಿಕ ದೇವಾಲಯದ ಹೊರ ಭಾಗದಲ್ಲೇ ಕೈಮುಗಿದು ನಿಂತಿದ್ದ ಸಚಿವರನ್ನು ಕಂದಾಯ ಇಲಾಖೆಯ ನೌಕರರು, ಇವರು ಸಚಿವರು ಎಂದು ಮಹಿಳಾ ಪೊಲೀಸ್ ಸಿಬ್ಬಂದಿಗೆ ಮನವರಿಕೆ ಮಾಡಿದ್ದಾರೆ. ಆಗ ಗರ್ಭಗುಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ.
ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ನಿಂದ ಕಾಂಗ್ರೆಸ್ಗೆ ಜನ ಹರಿದು ಬರುತ್ತಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಅವೆರಡು ಪಕ್ಷಗಳು ಖಾಲಿಯಾಗುತ್ತವೆ. ಚುನಾವಣೆ ವೇಳೆ ಎಲ್ಲಾ ತಿಳಿಯಲಿದೆ ಎಂದಿದ್ದಾರೆ.
ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (B.Y Vijayendra) ಆಯ್ಕೆ ಮಾಡಿದ್ದಾರೆ. ಪಾಪ ಯಡಿಯೂರಪ್ಪ ಅವರನ್ನು ಎರಡು ಸಲ ಮುಖ್ಯಮಂತಿ ಸ್ಥಾನದಿಂದ ತೆಗೆದಿದ್ದಾರೆ. ಅವರನ್ನು ಜೈಲಿಗೆ ಹಾಕಿದ್ದರು. ಈಗ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರಿಗೂ ಯಾವಾಗ ಈ ರೀತಿ ಮಾಡುತ್ತಾರೋ ಗೊತ್ತಿಲ್ಲ. ಸುಮ್ಮನೆ ಲಿಂಗಾಯಿತರ ವೋಟಿಗಾಗಿ ಹೀಗೆ ಮಾಡಿದ್ದಾರೆ. ನಂತರ ಅವರನ್ನು ಹತ್ತಿಕ್ಕುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾರಿಂದ ಸೂಕ್ತ ಸಮಯಕ್ಕೆ ಉತ್ತಮ ನಿರ್ಧಾರ: ಯಡಿಯೂರಪ್ಪ