ನವದೆಹಲಿ: ಲೋಕಸಭೆ ಚುನಾವಣೆ (Lok Sabha Elections) ಸನಿಹವಾಗುತ್ತಿರುವ ಹೊತ್ತಲ್ಲೇ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ದೇಶದ್ಯಾಂತ ಹೊಸ ಕಾನೂನು ಜಾರಿ ಮಾಡುವ ಭರವಸೆ ನೀಡಿದ್ದ ಬಿಜೆಪಿ (BJP) ಉತ್ತರಾಖಂಡದಲ್ಲಿ (Uttarakhand) ಮೊದಲು ಕಾನೂನು ಜಾರಿ ಮಾಡಲು ಚಿಂತಿಸಿದೆ.
ನಿವೃತ್ತ ನ್ಯಾ. ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಮುಂದಿನ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಲಿದ್ದು, ದೀಪಾವಳಿ ಬಳಿಕ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಿ, ಕಾನೂನು ಮಾಡಲು ಅಲ್ಲಿಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ- 6 ಗ್ಯಾರಂಟಿ ಘೋಷಿಸಿದ ತೆಲಂಗಾಣ ಕಾಂಗ್ರೆಸ್
ಈ ವರ್ಷದ ಜೂನ್ನಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಉತ್ತರಾಖಂಡಕ್ಕೆ ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಬಹುತೇಕ ಮುಂದಿನ ವಾರ ಹೊಸ ಕಾನೂನು ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ: ಜಾವೇದ್ ಅಖ್ತರ್
ಉತ್ತರಾಖಂಡ ಬಳಿಕ ಗುಜರಾತ್ನಲ್ಲೂ 2024ರ ಲೋಕಸಭಾ ಚುನಾವಣೆಯ ಮುನ್ನ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬಹುದು ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಗುಜರಾತ್ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಎರಡನೇ ರಾಜ್ಯವಾಗಲಿದೆ. ರಾಷ್ಟ್ರಮಟ್ಟದಲ್ಲಿ ಕಾನೂನು ಜಾರಿಗೆ ವಿರೋಧ ವ್ಯಕ್ತವಾಗುವ ಹಿನ್ನೆಲೆ ಹಂತ ಹಂತವಾಗಿ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕಾನೂನು ಜಾರಿಗೆ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ನಮ್ಮ ಪಕ್ಷದೊಳಗೆ ರಾಮ, ಹಿಂದೂಗಳನ್ನು ದ್ವೇಷಿಸುವ ನಾಯಕರಿದ್ದಾರೆ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ