ಬೆಂಗಳೂರು: ಮೊದಲನೇ ದಿನದ ಕಾರ್ಯ, ಕಲಾಪಗಳೆಲ್ಲ ಸುಸೂತ್ರವಾಗಿ ನಡೆಯುವ ಮೂಲಕ 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಗಲಾಟೆಗಳು ಅಂತ್ಯಗೊಂಡಿದೆ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಬಳಿ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಧ್ವನಿಮತದ ಮೂಲಕ ವಿಶ್ವಾಸಮತ ಮಂಡಿಸಿದ್ದು, ವಿಶ್ವಾಸ ಮತ ಅಂಗೀಕಾರವಾಗಿದೆ. ಈ ಕುರಿತು ರಾಜ್ಯದ ಜನತೆ ಆತಂಕದಲ್ಲಿದ್ದರು. ಅಲ್ಲದೆ, ಈ ಕೂತೂಹಲ ಕಣ್ತುಂಬಿಕೊಳ್ಳಲು ದೃಶ್ಯ ಮಾಧ್ಯಮದ ಮುಂದೆ ಕುಳಿತು ನೋಡುತ್ತಿದ್ದ ಜನ ಸಂತಸದಲ್ಲಿದ್ದಾರೆ. ಮಾತ್ರವಲ್ಲದೆ ಫೈನಾನ್ಸ್ ಬಿಲ್ ಕೂಡಾ ಪಾಸ್ ಆಗಿದೆ. ಹೀಗಾಗಿ ಒತ್ತಡದ ಕೆಲಸಗಳು ಎಲ್ಲ ಪೂರ್ಣಗೊಂಡಂತಾಗಿದೆ ಎಂದು ತಿಳಿಸಿದರು.
ಬಂದರೆ ಸ್ವಾಗತ: ಬುಧವಾರ ವಿಧಾನಸಭೆ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಬೋಪಯ್ಯ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಮಂಗಳವಾರ 10.30ಕ್ಕೆ ವಿಧಾನಸೌಧಕ್ಕೆ ಬರುತ್ತೇವೆ. ಅನರ್ಹ ಶಾಸಕರ ತೀರ್ಮಾನ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅನರ್ಹ ಶಾಸಕರು ಬಿಜೆಪಿಗೆ ಬಂದರೆ ನಮ್ಮ ಮುಖಂಡರು ಖಂಡಿತ ಸ್ವಾಗತ ಮಾಡುತ್ತಾರೆ. ನಮ್ಮ ನಾಯಕರು ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷೇತರ ಶಾಸಕ ನಾಗೇಶ್ ಬಗ್ಗೆಯೂ ಸಹ ನಮ್ಮ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪನವರಿಗೆ ಶುಭಾಶಯ ಕೋರಲು ಬಿಜೆಪಿ ಶಾಸಕರು ಹಾಗೂ ಮುಖಂಡರು ತಂಡೋಪತಂಡವಾಗಿ ಆಗಮಿಸಿದ್ದು, ಜಗದೀಶ್ ಶೆಟ್ಟರ್, ರೇಣುಕಾಚಾರ್ಯ, ಪ್ರಭು ಚೌಹಾಣ್, ಬಸವರಾಜ್ ಮತ್ತಿಮೂಡ್, ದತ್ತಾತ್ರೇಯ ಪಾಟೀಲ್, ರಾಜಕುಮಾರ ಪಾಟೀಲ್, ಅಪ್ಪುಗೌಡ, ಸುಭಾಷ್ ಗುತ್ತೇದಾರ್ ಸೇರಿದಂತೆ ವಿವಿಧ ಬಿಜೆಪಿ ಮುಕಂಡರು ಹೂಗುಚ್ಛ ನೀಡಿ ಶುಭ ಹಾರೈಸಿದರು.