ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕೆ ಸಂಕ್ರಾಂತಿ ಡೆಡ್ಲೈನ್ ಕೊಟ್ಟಿರೋ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇವತ್ತು ಮತ್ತೆ ಸದ್ದು ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಮುಖ್ಯಮಂತ್ರಿಗಳು ಶೀಘ್ರವೇ ಶಾಸಕಾಂಗ ಸಭೆ ಕರೆದು ಶಾಸಕರಿಗೆ ಭಾವನೆಗಳನ್ನ ವ್ಯಕ್ತಪಡಿಸಲು ಅವಕಾಶ ಕೊಡಬೇಕು. ಜನವರಿ 4 ಮತ್ತು 5 ರಂದು ಸಭೆ ನಡೆಸಿ ಅಂತ ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ಗೆ ಪತ್ರ ಬರೆದಿದ್ದಾರೆ. ಸಿಎಂ ಕಾರ್ಯ ವೈಖರಿಯ ಬಗ್ಗೆ ರಾಜ್ಯ ಉಸ್ತುವಾರಿ, ರಾಜ್ಯಾಧ್ಯಕ್ಷರ ಮುಂದೆಯೂ ಪ್ರಸ್ತಾಪ ಮಾಡ್ತೇನೆ. ಅನುಮತಿ ನೀಡಿದ್ರೆ ರಾಷ್ಟ್ರೀಯ ಅಧ್ಯಕ್ಷರ ಮುಂದೆಯೂ ಪ್ರಸ್ತಾಪಿಸುತ್ತೇವೆ ಅಂದಿದ್ದಾರೆ.
ಯತ್ನಾಳ್ ಹೇಳಿಕೆಗೆ ತಿರುಗೇಟು ಕೊಟ್ಟಿರೋ ಯಡಿಯೂರಪ್ಪ, ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಅಂತ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ಯಾರೋ ಒಂದಿಬ್ಬರು ಶಾಸಕರು ಹೀಗೆ ಮಾತನಾಡಬಹುದು. ಸಿಎಂ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ ಅಂದಿದ್ದಾರೆ. ಯತ್ನಾಳ್ ಹೇಳಿಕೆಗೆ ಸಚಿವ ಈಶ್ವರಪ್ಪ ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ಕುಡಿದು ಮಾತನಾಡುವವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.