ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ದಿಗಂತ್- ಐಂದ್ರಿತಾ ರಕ್ಷಣೆಗೆ ಪ್ರಭಾವಿ ಸ್ವಾಮೀಜಿಯೊಬ್ಬರು ನಿಂತಿದ್ದಾರೆ ಎಂಬ ಸುದ್ದಿ ಈಗ ಮುನ್ನೆಲೆಗೆ ಬಂದಿದೆ.
ಬುಧವಾರ ವಿಚಾರಣೆ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಕರೆ ಮಾಡಿದ್ದ ಪ್ರಭಾವಿ ಮಠಾಧೀಶರೊಬ್ಬರು, ದಿಗಂತ್-ಐಂದ್ರಿತಾ ನಮ್ಮ ಮಠದ ಭಕ್ತರು. ಅವರನ್ನು ಬಂಧಿಸಬೇಡಿ, ಈಗಾಗಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಒತ್ತಡ ಹೇರಿದ ವಿಚಾರ ಈಗ ರಾಜಕೀಯ ಮತ್ತು ಪೊಲೀಸ್ ವಲಯದಿಂದ ಕೇಳಿ ಬಂದಿದೆ.
ಕಾಕತಾಳೀಯ ಎಂಬಂತೆ ದಿಗಂತ್-ಐಂದ್ರಿತಾರನ್ನು ಕೇವಲ ಮೂರೂವರೆ ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು, ಇಬ್ಬರನ್ನು ಬಿಟ್ಟು ಕಳಿಸಿದ್ದಾರೆ. ಸೋಮವಾರ ಮನಸಾರೆ ದಂಪತಿಯ ಮೂರು ಮೊಬೈಲ್ಗಳ ರಿಟ್ರೀವ್ ವರದಿ ಬರುವ ಸಾಧ್ಯತೆ ಇದ್ದು, ನಂತರ ಸಿಸಿಬಿ ಇಬ್ಬರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಂಭವ ಇದೆ. ಇದನ್ನೂ ಓದಿ: ನಾವು ಏನೂ ಮಾತಾಡುವ ಹಾಗಿಲ್ಲ: ಐಂದ್ರಿತಾ ರೇ
ಡ್ರಗ್ಸ್ ಪ್ರಕರಣವನ್ನು ಮುಚ್ಚಿ ಹಾಕಿಲು ಪ್ರಭಾವಿಗಳು ಪ್ರಯತ್ನ ಮಾಡುತ್ತಿರುವ ಸುದ್ದಿ ಹೊಸದೇನು ಅಲ್ಲ. 14 ದಿನಗಳ ಹಿಂದೆ ನಟಿ ರಾಗಿಣಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಫೋನ್ ಮಾಡಿ, ಎಷ್ಟು ವಿಚಾರಣೆ ಮಾಡುತ್ತೀರಿ. ಬಿಟ್ಟು ಕಳುಹಿಸಿ ಅಂತಾ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು.