ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದು, ಗೆಲ್ಲೋದು ಪಕ್ಕಾ ಆಗಿದೆ. ಯಾಕಂದರೆ 17 ಮಂದಿ ಅತೃಪ್ತ ಶಾಸಕರ ಅನರ್ಹತೆಯಿಂದಾಗಿ ಬಿಎಸ್ವೈ ಬಹುಮತ ಸಾಬೀತಿಗೆ ಇದ್ದ ಎಲ್ಲಾ ಅಡ್ಡಿ, ಆತಂಕಗಳು ನಿವಾರಣೆಯಾಗಿದೆ.
ಒಂದು ವೇಳೆ ಅತೃಪ್ತರ ರಾಜೀನಾಮೆ ಅಂಗೀಕಾರವಾಗದೇ ಅಥವಾ ಅನರ್ಹಗೊಳ್ಳದೇ ಇದ್ದಿದ್ದರೆ ಅವರಲ್ಲಿ ಕೆಲವರು ಸದನಕ್ಕೆ ಬಂದು ಮೈತ್ರಿ ಪಾಳಯದಲ್ಲಿ ಗುರುತಿಸಿಕೊಳ್ಳುವ ಭಯ ಬಿಜೆಪಿ ಮುಖಂಡರನ್ನು ಕಾಡಿತ್ತು. ಆದರೆ ಇದೀಗ ಯಾವ ಆತಂಕವಿಲ್ಲದೆ ತಮ್ಮದೇ ಪಕ್ಷದ ಶಾಸಕರ ಮೂಲಕವೇ ಬಿಎಸ್ವೈ ಬಹುಮತ ಸಾಬೀತು ಪಡಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಬಿಎಸ್ವೈ ವಿಶ್ವಾಸಮತಯಾಚಿಸಲಿದ್ದಾರೆ. ವಿಶ್ವಾಸ ಗೆದ್ದ ಬಳಿಕ ಧನವಿನಿಯೋಗ ಮಸೂದೆಯೂ ಸದನದಲ್ಲಿ ಮಂಡನೆಯಾಗಲಿದ್ದು, ಮೈತ್ರಿ ಪಕ್ಷಗಳ ತಕರಾರು ಇಲ್ಲದೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ.
ಸದನದಲ್ಲಿ ಬಹುಮತ ಪಡೆದ ನಂತರ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಯ ಹಾದಿ ಕೂಡ ಸುಗಮವಾಗಲಿದೆ. ಮೈತ್ರಿ ಪಕ್ಷದಿಂದ ಬಂದವರಿಗೆ ನೀಡಬೇಕಿದ್ದ ಅಷ್ಟೂ ಸಚಿವ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಹೀಗಾಗಿ ಸ್ಪೀಕರ್ ಆದೇಶ ಬಿಜೆಪಿಯ ವಿಶ್ವಾಸ ಹೆಚ್ಚಿಸಿದೆ.