ಬಳ್ಳಾರಿ: ಪತ್ನಿ ಚಂದವಾಗಿ, ಅಂದವಾಗಿದ್ದಾಳೆ. ಅವಳಿಗೆ ಮೊಬೈಲ್ ನೀಡಿದ್ರೆ ಬೇರೆಯವರ ಜೊತೆ ಮಾತನಾಡುತ್ತಾಳೆಂದು ಅನುಮಾನಪಡುತ್ತಿದ್ದ ಶಿಕ್ಷಕ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೂವಿನಹಡಗಲಿ ತಾಲೂಕಿನ ಕುಂಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್, ತನ್ನ ಪತ್ನಿಯನ್ನು ನೇಣು ಬಿಗಿದು ನಂತರ ಹೃದಯಾಘಾತವೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಶಿಕ್ಷಕ ನಾಗರಾಜ್ ಚೆನ್ನಗಿರಿಯ ಹೆಬ್ಬಾಳಗೇರಿಯ ನೇತ್ರಾವತಿಯೊಂದಿಗೆ ಕಳೆದ ವರ್ಷವಷ್ಟೆ ಮದುವೆಯಾಗಿದ್ದ. ಆದ್ರೆ ಮದುವೆಯಾದ ನಂತರ ಪತ್ನಿಯನ್ನು ಸದಾ ಅನುಮಾನಿಸುತ್ತಿದ್ದ ನಾಗರಾಜ್, ಪತ್ನಿಯನ್ನು ತವರು ಮನೆಗೂ ಸಹ ಕಳುಹಿಸದೆ, ಮೊಬೈಲ್ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಅಲ್ಲದೇ ವರದಕ್ಷಿಣೆ ತಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.
ಪತಿಯ ಕಿರುಕುಳಕ್ಕೆ ಸೊಪ್ಪು ಹಾಕದ ನೇತ್ರಾವತಿ, ತವರು ಮನೆಯಿಂದ ವರದಕ್ಷಿಣೆ ತರಲು ನಿರಾಕರಿಸಿದ್ದರು. ಹೀಗಾಗಿ ನಾಗರಾಜ್ ಬುಧುವಾರ ರಾತ್ರಿ ಪತ್ನಿಗೆ ಹಡಗಲಿಯ ಇಸ್ಲಾಂಪೇಟೆಯ ಮನೆಯಲ್ಲಿ ಹಲ್ಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಪತ್ನಿಗೆ ಹೃದಯಾಘಾತವಾಗಿದೆ ಎಂದು ಬೀಗರಿಗೆ ಫೋನ್ ಮಾಡಿ ಕರೆಸಿದ್ದಾನೆ. ನೇತ್ರಾವತಿಯ ಪೋಷಕರು ಅಳಿಯನ ಮನೆಗೆ ಬಂದು ನೋಡಿದಾಗ ಮಗಳನ್ನು ನೇಣು ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಷ್ಟಾದ್ರೂ ಆಗಿದ್ದು ಆಗಿ ಹೋಗಿದೆ ಎಂದು ರಾಜಿ ಮಾಡಿಸುವ ಪ್ರಯತ್ನವನ್ನು ನಾಗರಾಜ್ ಮಾಡಿದ್ದ. ರಾಜಿಯಾಗದ ಹಿನ್ನಲೆಯಲ್ಲಿ ನಾಗರಾಜ್ ಇದೀಗ ತೆಲೆಮರೆಸಿಕೊಂಡಿದ್ದಾನೆ.
ಘಟನೆಯ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.