ಮಂಗಳೂರು: ಸಾಮಾಜಿಕ ಜಾಲತಾಣವನ್ನು ಬಳಸಿ ಕ್ರೈಂ ಮಾಡುವ ಜನರ ಮಧ್ಯೆ ಬೆಳ್ತಂಗಡಿಯ ಒಂದು ವಾಟ್ಸಪ್ ಗ್ರೂಪ್ ಸಂಘಟನೆ ಸದ್ದಿಲ್ಲದೆ ಸಮಾಜ ಸೇವೆ ಕಾರ್ಯ ಮಾಡುತ್ತಿದೆ.
ವೀರ ಕೇಸರಿ ಎಂಬ ವಾಟ್ಸಪ್ ಗ್ರೂಪಿನ ಸದಸ್ಯರು ಕಳೆದ ಮೂರೂವರೆ ವರ್ಷದಲ್ಲಿ 42 ಲಕ್ಷ ರೂ. ಹಣವನ್ನು ಸಂಗ್ರಹಿಸಿ ಬಡವರಿಗೆ ನೀಡಿದೆ. 40ನೇ ತಿಂಗಳ 100ನೇ ಯೋಜನೆಯನ್ನು ಈ ವಾಟ್ಸಪ್ ಗುಂಪಿನ ಸದಸ್ಯರು ಸೇರಿ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುವ ಮೂಲಕ ಅರ್ಥಪೂರ್ಣಗೊಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸೂರು ಇಲ್ಲದ ಕುಟುಂಬಕ್ಕೆ ಮನೆ ಕಟ್ಟಿ ನೀಡಿದ್ದಾರೆ. ಈ 100ನೇ ಯೋಜನೆಯನ್ನು ಅದ್ಧೂರಿಯಿಂದ ಮಾಡಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಯುವ ಉದ್ಯಮಿ ಅಶ್ವಥ್ ಬಳಂಜ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಮನೆ ಹಸ್ತಾಂತರಿಸಿದ್ದಾರೆ.
ಮಧ್ಯಮ ಕುಟುಂಬದ ಜನರೇ ಈ ವಾಟ್ಸಪ್ ಗುಂಪಿನ ಸದಸ್ಯರಾಗಿದ್ದು, ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜದ ಬಡಬಗ್ಗರಿಗೆ ನೆರವಾಗಿ ಮಾದರಿಯಾಗಿದ್ದಾರೆ.