ಲಕ್ನೋ: ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ಪರಾಭವಗೊಂಡಿರಬಹುದು. ಆದರೆ ಈ ಪ್ರಸಕ್ತ ಐಪಿಎಲ್ (IPL) ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ತಮ್ಮ ಶಿಸ್ತುಬದ್ಧ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪಂಜಾಬ್ ತಂಡದ ಅಪಾಯಕಾರಿ ಬ್ಯಾಟರ್ ಪ್ರಬ್ಸಿಮ್ರಾನ್ ಸಿಂಗ್ ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಅರ್ಜುನ್ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ಮಗನ ಈ ಆಟದ ಬೆನ್ನಲ್ಲೇ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್(Sachin Tendulkar) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅತ್ಯಂತ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಮಗನ ಬೆನ್ನು ತಟ್ಟಿದ್ದಾರೆ.
“ಅರ್ಜುನ್, ನೀನು ನಿಜಕ್ಕೂ ಅದ್ಭುತವಾಗಿ ಆಡಿದ್ದೀಯಾ. ನಿನ್ನ ಸಾಮರ್ಥ್ಯದ ಮೇಲೆ ನೀನು ನಂಬಿಕೆ ಇಟ್ಟು, ನಿರಂತರವಾಗಿ ಕಠಿಣ ಪರಿಶ್ರಮ ಪಟ್ಟಿದ್ದೀಯಾ. ಟೂರ್ನಿಯ ಕೊನೆಯ ಪಂದ್ಯದವರೆಗೂ ನಿನಗೆ ಸಿಗುವ ಒಂದು ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತಾ, ಸದಾ ಪಾಸಿಟಿವ್ ಆಗಿದ್ದ ನಿನ್ನ ಗುಣದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಕ್ರಿಕೆಟ್ ಕೇವಲ ಕೌಶಲ್ಯವನ್ನಷ್ಟೇ ಅಲ್ಲ, ಆಟಗಾರನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ನೀನು ಈ ಎರಡೂ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೀಯಾ. ಸದಾ ವಿನಮ್ರತೆಯಿಂದ ನೆಲದ ಮೇಲೆಯೇ ಕಾಲಿಟ್ಟರು, ಆಟವನ್ನು ಪ್ರೀತಿಸುತ್ತಾ ಹೀಗೆಯೇ ಮುಂದುವರಿ” ಎಂದು ಮೆಚ್ಚುಗೆ ನುಡಿಯನ್ನು ಬರೆದಿದ್ದಾರೆ. ಇದನ್ನೂ ಓದಿ: ಇಂದು ಪ್ಲೇಆಫ್ ಕ್ಲೈಮ್ಯಾಕ್ಸ್: ಮುಂಬೈ ಕೈಯಲ್ಲಿ ಪಂಜಾಬ್, ಕೋಲ್ಕತ್ತಾ ಭವಿಷ್ಯ
Well done, Arjun. ❤️
Proud of the way you’ve carried yourself through this season, always believing in your ability, staying patient, working hard quietly, and remaining positive despite having to wait for your opportunity till the very last match.
Cricket tests patience as much… pic.twitter.com/3RdiGkXbfT— Sachin Tendulkar (@sachin_rt) May 23, 2026
ಈ ಋತುವಿನ ಕೊನೆಯ ಪಂದ್ಯದಲ್ಲಿ ಲಕ್ನೋ ತಂಡದ ಆಡುವ ಹನ್ನೊಂದರ ಬಳಗ ಸೇರಿದ ಅರ್ಜುನ್, ತಂಡದ ಇತರ ಅನುಭವಿ ಬೌಲರ್ಗಳಿಗಿಂತಲೂ ಪರಿಣಾಮಕಾರಿ ದಾಳಿ ನಡೆಸಿದರು. ಪವರ್ ಪ್ಲೇ ಮುಗಿದ ತಕ್ಷಣ 7ನೇ ಓವರ್ ಎಸೆಯಲು ಬಂದ ಅರ್ಜುನ್, ತಮ್ಮ ಮೊದಲ ಓವರ್ನಲ್ಲೇ ಪ್ರಬ್ಸಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡುವ ಸುವರ್ಣ ಅವಕಾಶ ಸೃಷ್ಟಿಸಿದ್ದರು. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ ಮಾಡಿದ ಎಡವಟ್ಟಿನಿಂದಾಗಿ ಪ್ರಬ್ಸಿಮ್ರಾನ್ಗೆ ಜೀವದಾನ ಸಿಕ್ಕಿತ್ತು. ಆದರೂ ದೃತಿಗೆಡದ ಅರ್ಜುನ್, ಅಂತಿಮವಾಗಿ 15ನೇ ಓವರ್ನ ಕೊನೆಯ ಎಸೆತದಲ್ಲಿ ಅದೇ ಪ್ರಬ್ಸಿಮ್ರಾನ್ ಸಿಂಗ್ ಅವರನ್ನು ಎಲ್ಬಿಗೆ ಕೆಡವುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ತಂದ ಗೆಲುವು – ಪಂಜಾಬ್ಗೆ ಪ್ಲೇ ಆಫ್ ಕನಸು ಜೀವಂತ
