ಕಾರವಾರ: ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗಾಗಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಗೌರಿಯವರು ಕೊನೆಗೂ ಈ ಬಿರು ಬೇಸಿಗೆಯಲ್ಲೂ ಬಾವಿಯಲ್ಲಿ ಗಂಗೆ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಸಿಯ ಗಣೇಶ ನಗರದ ಗೌರಿಯವರು (Gauri) ಜ.30 ರಂದು ಅಂಗನಾಡಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಏಕಾಂಗಿಯಾಗಿ ಬಾವಿ ತೋಡುತ್ತಿದ್ದು, ಅವರು ಬಾವಿ ತೋಡದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಬಾವಿಗೆ ಹಲಗೆ ಮುಚ್ಚಿತ್ತು. ನಂತರ ಶಿರಸಿ ತಹಶೀಲ್ದಾರರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದ ಗೌರಿಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಸಂಸದ ಅನಂತಕುಮಾರ್ ಹೆಗಡೆ ಸ್ಥಳಕ್ಕೆ ಆಗಮಿಸಿ ಬಾವಿ ತೋಡಲು ನೆರವಾಗಿದ್ದಲ್ಲದೇ ಇದರ ಖರ್ಚನ್ನು ಸಹ ವಹಿಸಿಕೊಂಡು ಗೌರಿಗೆ ಸಹಾಯ ಆಗಲು ಇಬ್ಬರು ಕೆಲಸಗಾರರನ್ನು ನಿಯೋಜನೆ ಮಾಡಿದ್ದರು.
ಇದರ ಬೆನ್ನಲ್ಲೇ ಬುಧವಾರ ಬಾವಿಯಲ್ಲಿ ನೀರು ಬಂದಿದ್ದು, ಗಂಗೆಗೆ ಪೂಜೆ ಸಲ್ಲಿಸಿ ಗೌರಿ ಹಾಗೂ ಸ್ಥಳೀಯ ಜನರು ಖುಷಿಪಟ್ಟರು. ಪಬ್ಲಿಕ್ ಟಿವಿ ಸಹಕಾರವನ್ನು ಸ್ಮರಿಸದ ಗೌರಿ ಧನ್ಯವಾದ ಸಲ್ಲಿಸಿದ್ದಲ್ಲದೇ, ಶಿರಸಿಯ ಮಾರಿ ಜಾತ್ರೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಈ ಬಾವಿಯ ಮೂಲಕ ಮಾಡುತ್ತೇನೆ. 45 ಅಡಿ ಆಳಕ್ಕೆ ನೀರು ಬಂದಿದ್ದು ಖುಷಿ ತಂದಿದೆ. ನಾನು ಬಾವಿ ತೋಡಿ ನೀರು ಬರಿಸಿಯಾಯ್ತು, ಉಳಿದದ್ದು ಆಡಳಿತಕ್ಕೆ ಬಿಟ್ಟಿದ್ದು ಎಂದರು.ಜೊತೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್ಗೆ ಹೈಕೋರ್ಟ್ ರಿಲೀಫ್