ವಿಜಯಪುರ: ರಾಜ್ಯದಲ್ಲಿ ಎರಡು ಸಿಡಿ ಕಾರ್ಖಾನೆಗಳಿವೆ. ಬಿಜೆಪಿಯಲ್ಲಿರುವ ಓರ್ವ ಯುವನಾಯಕ, ಕಾಂಗ್ರೆಸ್ನಲ್ಲಿರುವ `ಮಹಾನಾಯಕ’ ಸೇರಿ ಕುತಂತ್ರ ಹೆಣೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ್, ಬಿ.ವೈ.ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಪಬ್ಲಿಕ್ಟಿವಿಯೊಂದಿಗೆ ಮಾತನಾಡಿದ ಅವರು, `ನನ್ನ ಸಿಡಿ ಪ್ರಕರಣ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಬೇಕು. ಈ ಕೇಸ್ ಹಿಂದೆಯೂ `ಮಹಾನಾಯಕ’ನ ತಂಡ ಕೆಲಸ ಮಾಡುತ್ತಿದೆ’ ಎಂಬ ರಮೇಶ್ ಜಾರಕಿಹೋಳಿ ಅವರ ಹೇಳಿಕೆಗೆ ದನಿಗೂಡಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಲಿದ್ದಾರೆ: ಬೊಮ್ಮಾಯಿ
ರಮೇಶ್ ಜಾರಕಿಹೋಳಿ ಹೇಳಿದ್ದರಲ್ಲಿ ಸತ್ಯವಿದೆ. ನಮ್ಮ ಬಿಜೆಪಿಯಲ್ಲಿರುವ ಓರ್ವ ಯುವನಾಯಕ, ಕಾಂಗ್ರೆಸ್ನಲ್ಲಿರುವ `ಮಹಾನಾಯಕ’ ಸೇರಿ ಕುತಂತ್ರ ಹೆಣೆದಿದ್ದಾರೆ. ಕಾಂಗ್ರೆಸ್ನಲ್ಲಿ ಒಂದು ಟೀಂ ಇದ್ದರೆ, ಬಿಜೆಯಲ್ಲೂ ಒಂದು ಟೀಂ ಇದೆ. ನಮ್ಮಲ್ಲಿರುವ ಕಳ್ಳ, ಕಾಂಗ್ರೆಸ್ನಲ್ಲಿರುವ ಮಹಾಕಳ್ಳ ಇಬ್ಬರೂ ಸೇರಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ
ರಾಜೀನಾಮೆ ಕಾಂಗ್ರೆಸ್ ಅವನತಿಯ ಹೆಜ್ಜೆ: ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಅವನತಿಯ ಹೆಜ್ಜೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲಕ್ಚ್ಮೀ ಹೆಬ್ಬಾಳ್ಕರ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದರ ಹಿಂದೆ ಷಡ್ಯಂತ್ರವಿದೆ. ಇದು ಕಾಂಗ್ರೆಸ್ ವ್ಯೂಹ, ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯಗೆ ಶ್ಲಾಘನೆ: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಕರ್ನಾಟಕದ ರಾಜಕಾರಣ ಸುಸಂಸ್ಕೃತ, ಒಳ್ಳೆಯ ರಾಜಕಾರಣ. ರಾಮಕೃಷ್ಣ ಹೆಗಡೆ, ನಿಜಲಿಂಗಪ್ಪ, ಎಸ್.ಎಂ.ಕೃಷ್ಣ, ಡಿ.ದೇವರಾಜ ಅರಸು ಅಂತಹವರನ್ನು ನಾವು ನೋಡಿದ್ದೇವೆ. ಸಿದ್ದರಾಮಯ್ಯ ಅವರ ಬಗ್ಗೆ ಕೂಡ ನಮಗೆ ಗೌರವವಿದೆ. ಅವರು ಇಷ್ಟು ನೀಚ ರಾಜಕಾರಣ ಮಾಡಲ್ಲ, ಅವರು ತೂಕದಲ್ಲಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ
ಈಗ ಎಲ್ಲ ಪಕ್ಷಗಳಲ್ಲೂ ಕಳ್ಳರು, ಗೂಂಡಾಗಳು, ಲೂಟಿಕೋರರು, ಗಣಿ ಲೂಟಿ ಮಾಡಿದವರು ಇದ್ದಾರೆ. ಮಾದರಿ ಕರ್ನಾಟಕದಲ್ಲಿಂದು ಸಿಡಿ ಮಾಡಿಸೋದು, ಬ್ಲಾಕ್ ಮೇಲ್ ಮಾಡುವಂತಹ ನೀಚ ರಾಜಕಾರಣ ನಡೆಯುತ್ತಿದೆ. ಬೆಂಗಳೂರಿನಲ್ಲಿ ಇಂತಹದೊಂದು ಟೀಂ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.