ಬೆಳಗಾವಿ: ಚುಚ್ಚುಮದ್ದು ಪಡೆದ ಮೂವರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿದ್ದು, ಮಕ್ಕಳನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಸ್ತುತ ರಾಮದುರ್ಗದಲ್ಲಿ ಮೃತ 14 ತಿಂಗಳ ಮಗು ಮಧು ಮರಣೋತ್ತರ ಪರೀಕ್ಷೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮುಗಿದಿದ್ದು, ಮಗುವಿನ ಮೃತದೇಹದ ಕೈಯನ್ನು ಹಿಡಿದು ಮಗುವಿನ ಅಜ್ಜಿ ಅಂಬುಲೆನ್ಸ್ ಹತ್ತಿದ್ದಾರೆ. ಈ ವೇಳೆ ಮಗುವಿನ ಮುಖ ನೋಡಿದ ಪೋಷಕರ ಕಣ್ಣೀರು ನಿಲ್ಲುತ್ತಿರಲಿಲ್ಲ.
ಹೇಗಾಯಿತು?
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜನವರಿ 13ರಂದು 14 ತಿಂಗಳ ಮಧು ಚುಚ್ಚುಮದ್ದು ಪಡೆದಿದ್ದಳು. ಮಕ್ಕಳಿಗೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಚುಚ್ಚುಮದ್ದು ನೀಡಿದ್ದರು. ಬಳಿಕ ಮಗುವಿಗೆ ವಾಂತಿಬೇಧಿ ಕಾಣಿಸಿಕೊಂಡಿತ್ತು. ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮಧು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
ಮೂರು ದಿನಗಳ ಅಂತರದಲ್ಲಿ ಮೂವರು ಮಕ್ಕಳ ಸಾವು ಸಂಭವಿಸಿದೆ. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿಯಿಂದ ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳಿಗೆ ಚುಚ್ಚುಮದ್ದು ಹಾಗೂ ವಯಸ್ಕರಿಗೆ ಕೋವಿಡ್ ವ್ಯಾಕ್ಸಿನ್ ಒಂದೇ ಕೇಂದ್ರದಲ್ಲಿ ಅಕ್ಕಪಕ್ಕವಿಟ್ಟು ಚುಚ್ಚುಮದ್ದು ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬರುತ್ತಿದೆ.
ಮಗುವಿನ ಸಾವಿಗೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: 4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ