ಚಂಡೀಗಢ: ಭಾರತೀಯ ವಿದ್ಯಾರ್ಥಿಗಳು (Indian Students) ನಮ್ಮನ್ನು ಥಳಿಸಿದ್ದಾರೆ ಎಂದು ಆರೋಪಿಸಿದ ಸುಮಾರು 60 ನೈಜೀರಿಯಾದ ವಿದ್ಯಾರ್ಥಿಗಳು (Nigerian Students) ಕ್ಯಾಂಪಸ್ನಿಂದ ಹೊರನಡೆದಿರುವ ಘಟನೆ ಗುರುಗ್ರಾಮದ ಜಿಡಿ ಗೋಯೆಂಕಾ ವಿಶ್ವವಿದ್ಯಾಲಯದಲ್ಲಿ (Gurgaon University) ನಡೆದಿದೆ.
ವರದಿಗಳ ಪ್ರಕಾರ ಆಟದ ಮೈದಾನದಲ್ಲಿ ನಮಾಜ್ (Namaz) ಮಾಡಿದ ವಿಷಯಕ್ಕೆ ಭಾರತೀಯ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದರು. ಬಳಿಕ ನೈಜೀರಿಯಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಕೊಠಡಿಯೊಳಗೆ ನಮಾಜ್ ಮಾಡುವಂತೆ ಕೇಳಿಕೊಂಡಿದ್ದಾರೆ. ಮೊದಲಿಗೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಆಡಳಿತ ತಿಳಿಸಿತ್ತು. ಆದರೆ ಇದೀಗ ತಮ್ಮ ಮೇಲೆ ಭಾರತೀಯ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದಾಗಿ ನೈಜೀರಿಯಾದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನಮಾಜ್ ವಿವಾದದ ಕೆಲ ದಿನಗಳ ಬಳಿಕ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಭಾರತ ಹಾಗೂ ನೈಜೀರಿಯಾದ ವಿದ್ಯಾರ್ಥಿಗಳು ಮಿಶ್ರ ತಂಡಗಳಲ್ಲಿ ಒಟ್ಟಿಗೆ ಫುಟ್ಬಾಲ್ ಆಡಬೇಕಿತ್ತು. ಆದರೆ ಇದಕ್ಕೆ ತಂಡದ ನಾಯಕ ಆಕ್ಷೇಪ ವ್ಯಕ್ತಪಡಿಸಿದ್ದು, ಪಂದ್ಯವನ್ನೇ ರದ್ದುಗೊಳಿಸಲಾಯಿತು. ಪಂದ್ಯ ರದ್ದಾದ ಬಳಿಕವೂ ಕೆಲ ಸ್ಥಳೀಯ ವಿದ್ಯಾರ್ಥಿಗಳು ಮೈದಾನಕ್ಕೆ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೈಜೀರಿಯನ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ
ನಮ್ಮ ಮೇಲೆ ದಾಳಿ ಮಾಡುವ ವೇಳೆ ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ವಿದ್ಯಾರ್ಥಿಗಳು ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ನೈಜೀರಿಯಾದ ವಿದ್ಯಾರ್ಥಿಗಳು ಘರ್ಷಣೆಯನ್ನು ಸರಿಪಡಿಸಲು ತಮ್ಮ ರಾಯಭಾರ ಕಚೇರಿಯನ್ನು ಮಧ್ಯ ಪ್ರವೇಶಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ಉಪತಳಿ BQ.1 ಭಾರತದಲ್ಲಿ ಪತ್ತೆ