ಬೆಂಗಳೂರು: ಹೊಸ ವರ್ಷದಲ್ಲಿ ಕುಡಿದು ವಾಹನ ಚಲಾಯಿಸುವ ಸವಾರರೇ ಎಚ್ಚರ, ಯಾಕೆಂದರೆ ಕುಡಿದು ವಾಹನ ಚಲಾಯಿಸಿದರೇ ರಾತ್ರಿ ಪೂರ್ತಿ ಜಾಗರಣೆ ಮಾಡಬೇಕಾಗುತ್ತದೆ.
ಹೌದು.ಹೊಸ ವರ್ಷಕ್ಕೆ ಮುಂಜಾಗೃತ ಕ್ರಮವಾಗಿ ಬೆಂಗಳೂರು ಸಂಚಾರಿ ಪೊಲೀಸರು ಹೊಸ ತಂತ್ರ ರೂಪಿಸಿದ್ದು, ಕುಡಿದು ವಾಹನ ಚಲಾಯಿಸುವವರಿಗಾಗಿ ಪೊಲೀಸರು ಕಲ್ಯಾಣ ಮಂಟಪವನ್ನು ಬುಕ್ ಮಾಡಿದ್ದಾರೆ. ಒಂದು ವೇಳೆ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ರಾತ್ರಿಯೆಲ್ಲಾ ಮದುವೆ ಮನೆಯಲ್ಲಿ ಲಾಕ್ ಆಗಬೇಕಾಗುತ್ತದೆ.
ಈಗಾಗಲೇ ಸಂಚಾರಿ ಪೊಲೀಸರು 8 ಕಲ್ಯಾಣ ಮಂಟಪಗಳನ್ನ ಬುಕ್ ಮಾಡಿದ್ದಾರೆ. ಕುಡಿದು ಸಿಕ್ಕಿ ಬಿದ್ದವರನ್ನ ಕಲ್ಯಾಣ ಮಂಟಪದಲ್ಲಿ ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ರಾತ್ರಿಯಿಡಿ ಕಲ್ಯಾಣ ಮಂಟಪದಲ್ಲಿ ಜಾಗರಣೆ ಮಾಡಿಸಿ ಬೆಳಗ್ಗೆ ಮದ್ಯದ ಅಮಲು ಇಳಿದ ನಂತರ ಬಿಟ್ಟು ಕಳಿಸಲಾಗುತ್ತದೆ. ಹೊಸ ವರ್ಷ ಕುಡಿದು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಹೊಸ ಪ್ಲಾನ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ರಾತ್ರಿ ಜಾಗರಣೆ ಜೊತೆಗೆ ಸಾವಿರಾರು ರೂಪಾಯಿ ದಂಡ ಹಾಕಲು ಪೊಲೀಸರು ಸನ್ನದಾಗಿದ್ದಾರೆ. ಇದರ ಜೊತೆಗೆ ತುರ್ತು ಸಂದರ್ಭಕ್ಕಾಗಿ 100 ಅಂಬುಲೆನ್ಸ್ ಗಳನ್ನು ಸಹ ಬುಕ್ ಮಾಡಿದ್ದಾರೆ. ಅಂಬುಲೆನ್ಸ್ ನಿರ್ವಹಣೆಗೆ ಓರ್ವ ಅಧಿಕಾರಿ ನೇಮಕ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅಂಬುಲೆನ್ಸ್ ನಿಲ್ಲಿಸಲು ಸೂಚನೆಯನ್ನು ನೀಡಲಾಗಿದೆ. ಇನ್ನೂ ಸಂಜೆ 4 ಗಂಟೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಕಾಮರಾಜ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ 8 ಪ್ರಮುಖ ರಸ್ತೆಗಳು ಬಂದ್ ಆಗಲಿವೆ.
ಈ ಪ್ರಮುಖ ರಸ್ತೆಯಲ್ಲಿ ಸಂಜೆ 4 ಗಂಟೆಯಿಂದ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದ್ದು, ಡ್ರಿಂಕ್ ಆಂಡ್ ಡ್ರೈವ್ ಕೇಸ್ ತಪಾಸಣೆ ವೇಳೆ ಸಂಪೂರ್ಣ ಚಿತ್ರೀಕರಣ ಮಾಡಲು ಸೂಚನೆ ನೀಡಲಾಗಿದೆ. ಯಾರೇ ಗಲಾಟೆ ಮಾಡಿದರೂ ರೆಕಾರ್ಡ್ ಮಾಡಬೇಕಾಗುತ್ತದೆ. ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಗೆ ಪ್ರತ್ಯೇಕ 200 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಹೇಳಿದ್ದಾರೆ.
https://www.youtube.com/watch?v=lC6lrjh7AHk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv