– ಅಕ್ರಮ ಆಸ್ತಿ ನೋಡಿ ದಂಗಾದ ಪೊಲೀಸ್ ಇಲಾಖೆ
– 16 ಸ್ಥಳಗಳ ಮೇಲೆ ದಾಳಿ
ಹೈದರಾಬಾದ್: ತೆಲಂಗಾಣದಲ್ಲಿ(Telangana) ಭ್ರಷ್ಟ ಅಧಿಕಾರಿಯೊಬ್ಬರ ಕೋಟಿ ಕೋಟಿ ಅಕ್ರಮ ಆಸ್ತಿಯ ವಿವರ ನೋಡಿ ಇಡೀ ಪೊಲೀಸ್ ಇಲಾಖೆಯೇ (Police Department) ದಂಗಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ದಾಳಿಯ ವೇಳೆ ತೆಲಂಗಾಣ, ಕರ್ನಾಟಕ ಸೇರಿದಂತೆ 50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ACB) ಹೈದರಾಬಾದ್ನ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DSP) ಸಂಕೀರೆಡ್ಡಿ ಭೀಮ್ ರೆಡ್ಡಿ(Sankireddy Bhim Reddy) ಅವರ ಮನೆ, ಕಚೇರಿ, ಸ್ನೇಹಿತರು ಮತ್ತು ಬೇನಾಮಿಗಳಿಗೆ ಸೇರಿದ 16 ಸ್ಥಳಗಳಲ್ಲಿ ಜುಲೈ 2 ರಂದು ಏಕಕಾಲಕ್ಕೆ ಶೋಧ ಕಾರ್ಯ ನಡೆಸಲಾಗಿದೆ.
ತಮ್ಮ ಸೇವಾ ಅವಧಿಯಲ್ಲಿ ಭೀಮ್ ರೆಡ್ಡಿ ಅವರು ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಮಾರ್ಗಗಳ ಮೂಲಕ ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಎಸಿಬಿ ತಿಳಿಸಿದೆ.
ದಾಳಿಯಲ್ಲಿ ಅಕ್ರಮ ಆಸ್ತಿಯ ಪರ್ವತವೇ ಪತ್ತೆಯಾಗಿದ್ದು, ಭೀಮ್ ರೆಡ್ಡಿ ಅವರ ಆಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಹೈದರಾಬಾದ್ನ ಅತ್ಯಂತ ದುಬಾರಿ ಪ್ರದೇಶಗಳಾದ ಗಚಿಬೌಲಿ, ಮಣಿಕೊಂಡ, ಇಬ್ರಾಹಿಂಬಾಗ್ ಮತ್ತು ತೆಲ್ಲಾಪುರದಲ್ಲಿ ಐಷಾರಾಮಿ ವಿಲ್ಲಾಗಳು ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ಹಲವು ಫ್ಲಾಟ್ಗಳನ್ನು ಹೊಂದಿದ್ದಾರೆ. ಇದರಲ್ಲಿ ಜಿ+2 ಅಂತಸ್ತಿನ ಪೆಂಟ್ಹೌಸ್ ಮತ್ತು 3,000 ಚದರ ಅಡಿಯ ವಾಣಿಜ್ಯ ಮಳಿಗೆಗಳೂ ಸೇರಿವೆ.
ಹೈದರಾಬಾದ್ ಸುತ್ತಮುತ್ತಲಿನ ಓಪನ್ ಪ್ಲಾಟ್ಗಳ ಜೊತೆಗೆ ಕರ್ನಾಟಕದಲ್ಲಿ 44 ಎಕರೆ ಮತ್ತು ಬೆಂಗಳೂರಿನ ದೇವನಹಳ್ಳಿಯಲ್ಲಿ 1 ಎಕರೆ ಸೇರಿದಂತೆ ಒಟ್ಟು 50 ಎಕರೆಗೂ ಅಧಿಕ ಕೃಷಿ ಭೂಮಿಯ ದಾಖಲೆಗಳು ಸಿಕ್ಕಿವೆ.
ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಡಿಎಸ್ಪಿ ಭೀಮ್ ರೆಡ್ಡಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಭ್ರಷ್ಟ ಅಧಿಕಾರಿಯೊಬ್ಬನ ಈ ಕೋಟಿ ಕೋಟಿ ರೂಪಾಯಿಗಳ ಕಪ್ಪು ಸಾಮ್ರಾಜ್ಯ ಹೈದರಾಬಾದ್ ಪೊಲೀಸ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಇದನ್ನೂ ಓದಿ: ಗೃಹ ಸಚಿವ ಖರ್ಗೆ ತವರಲ್ಲೇ ಪೊಲೀಸ್ ಠಾಣೆಯಿಂದ ಪೋಕ್ಸೊ ಕೇಸ್ ಆರೋಪಿ ಪರಾರಿ

ದಾಳಿಯಲ್ಲಿ ಏನು ಸಿಕ್ಕಿದೆ?
1. ಹೈದರಾಬಾದ್ನ ಇಬ್ರಾಹಿಂಬಾಗ್ನ ವೆಸ್ಸೆಲ್ಲಾ ಮೆಡೋಸ್ನಲ್ಲಿ ಒಂದು ವಿಲ್ಲಾ.
2. ಟೆಲಿಕಾಂ ನಗರದಲ್ಲಿರುವ ಜಿ+2+ಪೆಂಟ್ಹೌಸ್ ವಸತಿ ಮನೆ.
3. ಟೆಲಿಕಾಂ ನಗರದ ಸಾಯಿ ಪ್ರಭಾ ರೆಸಿಡೆನ್ಸಿಯಲ್ಲಿ ಒಂದು ಫ್ಲಾಟ್.
4. ಗಚಿಬೌಲಿಯ ಕ್ರಾಂತಿ ಸಿಯೋನ್ ಅಪಾರ್ಟ್ಮೆಂಟ್ನ ಒಂದು ಫ್ಲಾಟ್.
5. ಮಣಿಕೊಂಡದ ಲಂಕೋಹಿಲ್ಸ್ ರಸ್ತೆಯಲ್ಲಿರುವ 500 ಚದರ ಯಾರ್ಡ್ ವಿಸ್ತೀರ್ಣದ ಜಿ+5 ವಾಣಿಜ್ಯ ಸಂಕೀರ್ಣದಲ್ಲಿನ ಪಾಲು.
6. ಮಣಿಕೊಂಡ ಮರ್ರಿಚೆಟ್ಟು ಜಂಕ್ಷನ್ ಬಳಿ 3000 ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಮಳಿಗೆ.
7. ತೆಲ್ಲಾಪುರದ ಅಭಿನಂದ ರೆಸಿಡೆನ್ಸಿಯಲ್ಲಿರುವ ಎರಡು ವಸತಿ ಫ್ಲಾಟ್ಗಳು.
8. ಪ್ರಗತಿ ರಿಸಾರ್ಟ್ಸ್ನಲ್ಲಿ 500 ಚದರ ಯಾರ್ಡ್ನ ಮುಕ್ತ ನಿವೇಶನ.
9. ಸಂಗಾರೆಡ್ಡಿಯ ಜಹೀರಾಬಾದ್ನಲ್ಲಿ 3.5 ಎಕರೆ ಕೃಷಿ ಭೂಮಿ.
10. ಕರ್ನಾಟಕದಲ್ಲಿರುವ 6-00 ಎಕರೆ ಕೃಷಿ ಭೂಮಿ.
11. ಕರ್ನಾಟಕದಲ್ಲಿಯೇ ಇರುವ ಮತ್ತೊಂದು 38 ಎಕರೆ ಕೃಷಿ ಭೂಮಿ.
12. ಬೆಂಗಳೂರಿನ ದೇವನಹಳ್ಳಿಯಲ್ಲಿ 1 ಎಕರೆ ಜಮೀನು.
13. ನಾಗೋಲದ ಕಾಮಿನೇನಿ ಆಸ್ಪತ್ರೆ ಬಳಿ 200 ಚದರ ಯಾರ್ಡ್ನ ಮುಕ್ತ ನಿವೇಶನ.
14. ಜಿಪಿಆರ್ ಹೌಸಿಂಗ್ ಸೊಸೈಟಿ ಬಳಿ ಇರುವ 400 ಚದರ ಯಾರ್ಡ್ನ ನಿವೇಶನ.
15. ಪಟಾನ್ಚೆರುನಲ್ಲಿ ಆಸ್ತಿ.
16. ಪಟಾನ್ಚೆರುನಲ್ಲಿರುವ 200 ಚದರ ಯಾರ್ಡ್ನ ಮತ್ತೊಂದು ಮುಕ್ತ ನಿವೇಶನ.
17. ವಿಕಾರಾಬಾದ್ನ ಮೊಮಿನ್ಪೇಟೆಯಲ್ಲಿ 1,000 ಚದರ ಯಾರ್ಡ್ ವಿಸ್ತೀರ್ಣದ ಜಮೀನು.
18. ವಿಕಾರಾಬಾದ್ನ ಮೊಮಿನ್ಪೇಟೆಯಲ್ಲಿ 2 ಎಕರೆ ಕೃಷಿ ಭೂಮಿ.
19. ಮೆಸರ್ಸ್ ಶ್ರೀ ರಾಘವೇಂದ್ರ ರಾಕ್ ಸ್ಯಾಂಡ್ ಮಿನರಲ್ಸ್ ಕಂಪನಿಯಲ್ಲಿ 75 ಲಕ್ಷ ರೂ. ಹೂಡಿಕೆ.
20. ಸಿಸಿ ಕುಂಟಾದ ಮುಚಿಂತಲ ಗ್ರಾಮದಲ್ಲಿರುವ 4-20 ಎಕರೆ ವಿಸ್ತೀರ್ಣದ ಕೃಷಿ ಭೂಮಿ.
ಶೋಧ ಕಾರ್ಯದ ವೇಳೆ ಮನೆಯಲ್ಲಿ ಅಂದಾಜು 3.60 ಲಕ್ಷ ನಗದು ಮತ್ತು ಅವರ ಬೆನಾಮಿ ಮನೆಯಲ್ಲಿ 40 ಲಕ್ಷ ರೂ. ನಗದು ಪತ್ತೆಯಾಗಿದೆ. ಇದರೊಂದಿಗೆ ಸುಮಾರು 2 ಕೆಜಿ ಚಿನ್ನದ ಆಭರಣಗಳು, 20 ಕೆಜಿ ಬೆಳ್ಳಿ ವಸ್ತುಗಳು ಮತ್ತು ವಿವಿಧ ಖಾತೆಗಳಲ್ಲಿದ್ದ ಒಟ್ಟು 19 ಲಕ್ಷದ 91 ಸಾವಿರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪತ್ತೆಹಚ್ಚಲಾಗಿದೆ. ದಾಖಲೆಗಳಲ್ಲಿ ನಮೂದಾಗಿರುವ ಈ ಎಲ್ಲಾ ಸ್ಥಿರ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯವು (Market Value) ದಾಖಲೆಗಳ ಮೌಲ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗಿರಬಹುದು ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
