ಧಾರವಾಡ: ಮಳೆ ಹೆಚ್ಚಾದರೆ ಅಥವಾ ಮಳೆಯೇ ಇಲ್ಲದೇ ಬೆಳೆ ನಷ್ಟವಾದರೆ ವಿಮೆ (Crop Insurance) ಸಹಾಯ ಪಡೆಯಬಹುದು ಎಂದು ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಇದೇ ಬೆಳೆ ವಿಮೆ ಯೋಜನೆಯಲ್ಲಿ ಭಾರೀ ವಂಚನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 2025-26 ಸಾಲಿನಲ್ಲಿ ಈ ತಬಕದಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12,271 ಜನ ರೈತರು (farmers) ಬೆಳೆ ವಿಮೆಗಾಗಿ ಅರ್ಜಿ ಹಾಕಿದ್ದರು. ಅದರಲ್ಲಿ 5,241 ಜನರಿಗೆ ಬೆಳೆ ನಷ್ಟದ ವಿಮೆ ಹಣ ಬಂದಿದೆ. ಇದೇ 5,241 ಜನರಲ್ಲಿ ಕೆಲವರು ಸುಳ್ಳು ಮಾಹಿತಿ ಕೊಟ್ಟು ಬೆಳೆ ನಷ್ಟ ವಿಮೆ ಪಡೆದಿದ್ದಾರೆ. ಕ್ರಾಪ್ ಕಟಿಂಗ್ ಮತ್ತು ಕ್ರಾಪ್ ಸರ್ವೆ ಮಾಡಿದ್ದಲ್ಲಿ ಈ ವಂಚನೆ ಆಗಿದೆ.

ಇದರಲ್ಲಿ ಒಟ್ಟು 9 ಕೋಟಿ 39 ಲಕ್ಷ ವಂಚನೆ ಕಂಡು ಬಂದಿದೆ. ಈ ಪ್ರಕರಣ ಕೃಷಿ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆಯೇ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ನಾಯ್ಕರ್ ಒಟ್ಟು 10 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಇದರಲ್ಲಿ ಒಂದು ಇನ್ಶುರೆನ್ಸ್ ಕಂಪನಿ ಕೂಡ ಶಾಮೀಲಾಗಿದೆ. ಪ್ರಕರಣ ದೂರು ದಾಖಲಾಗುತ್ತಿದ್ದಂತೆಯೇ ಎಸ್ಪಿ ಗುಂಜನ್ ಆರ್ಯ ಇದನ್ನು ಸೈಬರ್ ಕ್ರೈಮ್ ತನಿಖೆಗೂ ನೀಡಿದ್ದಾರೆ.
ಇದರಲ್ಲಿ ಬೆಂಗಳೂರಿನ ಶ್ರೀನಿವಾಸ ಇನ್ಶುರೆನ್ಸ್ ಕಂಪನಿ ಮೇಲೆಯೇ ದೂರು ದಾಖಲಾಗಿದೆ. ಅಲ್ಲದೇ ಸ್ಥಳೀಯ ರೈತರಾದ ಬಸಪ್ಪ ಕುರಟ್ಟಿ, ಪ್ರಕಾಶ ತಿಪ್ಪಣ್ಣವರ, ಬಸವರಾಜ್ ವಾಲಿಕಾರ್, ಶಂಕ್ರೆಪ್ಪ ತಿಪ್ಪಣ್ಣವರ, ಮಂಜುನಾಥ ಹಿರೇಮಠ, ಬಸಯ್ಯ ಹಿರೇಮಠ, ಮಂಜುನಾಥ ಹಾನಗಲ್, ಬಸಯ್ಯ ರುದ್ರಯ್ಯ ಹಿರೇಮಠ ಮತ್ತು ಮಣಿಕಂಠ ಹಿರೇಮಠ ಎಂಬುವವರ ಮೇಲೆ ದೂರು ದಾಖಲಾಗಿದೆ.
ಇವರೆಲ್ಲ ಸೇರಿ ಬೆಳೆನೇ ಇಲ್ಲದ ಕಡೆ ಬೆಳೆ ಇದೆ ಎಂದು ಮತ್ತು ಕೆಲವು ಕಡೆ ಬೇರೆ ಬೆಳೆ ಬೆಳೆದು ಮತ್ತೊಂದು ಬೆಳೆ ತೋರಿಸಿ ವಂಚನೆ ಮಾಡಿದ್ದಾರೆ. ಇವರಿಗೆ ಇನ್ಶುರೆನ್ಸ್ ಕಂಪನಿ ಕೂಡ ಸಾಥ್ ನೀಡಿದೆ.
ಸದ್ಯ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೂ ಇದು ಬಂದಿದೆ. ಆದರೆ ವಿಮಾ ಕಂಪನಿ ನಮ್ಮ ಸಂಪರ್ಕದಲ್ಲಿ ಬರಲ್ಲ ಎಂದಿದ್ದಾರೆ. ಆದರೂ ಬೇರೆ ಕಡೆ ಕೂಡ ಈ ರೀತಿ ಆಗಿದ್ದಕ್ಕೆ ಸಭೆಯಲ್ಲಿ ಅಧಿಕಾರಿಗಳಿಗೆ ಮತ್ತು ಕೇಂದ್ರ ಸಚಿವ, ಸಂಸದರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಸದ್ಯಕ್ಕೆ ಸೈಬರ್ ಕ್ರೈಮ್ ಪೊಲೀಸರು ವಿಮೆ ಯಾವ ಬೆಳೆಯ ಮೇಲೆ ಪಡೆದಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿಜವಾಗಿಯೂ ಬೆಳೆ ವಿಮೆ ವಂಚನೆ ಆಗಿದ್ದೇ ಆದರೆ ತಪ್ಪಿತಸ್ಥರ ಮೇಲೆ ಕ್ರಮ ಆಗಲೇ ಬೇಕಿದೆ.
