ಹಲವಾರು ತಿಂಗಳಿಂದ ಸುದ್ದಿಯಲ್ಲಿರುವ ರಾಮಾಯಣ (Ramayana) ಸಿನಿಮಾದ ಶೂಟಿಂಗ್ ಕೊನೆಗೂ ಶುರುವಾಗಿದೆ. ಇಂದಿನಿಂದ ಚಿತ್ರೀಕರಣವನ್ನು ಆರಂಭಿಸಿದ್ದಾರಂತೆ ನಿರ್ದೇಶಕ ನಿತಿಶ್ ತೀವಾರಿ. ಈ ಹಂತದ ಚಿತ್ರೀಕರಣದಲ್ಲಿ ಸ್ಟಾರ್ ನಟರು ಭಾಗಿ ಆಗುತ್ತಿಲ್ಲ ಎನ್ನುವ ಮಾಹಿತಿ ಇದೆ. ಗುರುಕುಲ ದೃಶ್ಯದಿಂದ ಚಿತ್ರೀಕರಣ (Shooting) ಆರಂಭಿಸಿದ್ದಾರೆ. ನಂತರದ ಚಿತ್ರೀಕರಣದಲ್ಲಿ ಸ್ಟಾರ್ ತಾರಾಗಣವೇ ಇರಲಿದೆ.
ಈ ನಡುವೆ ರಾಮಾಯಣ ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಮಂಡೋದರಿ ಪಾತ್ರವನ್ನು ಹಿಂದಿಯ ಖ್ಯಾತ ಕಿರುತೆರೆ ನಟಿ ಸಾಕ್ಷಿ (Sakshi Tanwar) ತನ್ವರ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಸಾಕಷ್ಟು ಸದ್ದು ಕೂಡ ಮಾಡಿತ್ತು. ಈ ವಿಷಯ ಸ್ವತಃ ಸಾಕ್ಷಿಗೂ ತಲುಪಿತ್ತು. ಈ ಕುರಿತಂತೆ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಮಾಯಣ ಕುರಿತಂತೆ ಸಿನಿಮಾ ಆಗುತ್ತಿರುವ ವಿಷಯವನ್ನು ನಾನೂ ಬಲ್ಲೆ. ಆದರೆ, ಮಂಡೋದರಿ ಪಾತ್ರಕ್ಕೆ ನನ್ನ ಹೆಸರು ಬಳಕೆ ಆಗಿದ್ದು ನಾನೂ ಕೇಳಿದ್ದೇನೆ. ಆದರೆ, ಈವರೆಗೂ ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಈವರೆಗಿನ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.
ನಿರ್ದೇಶಕ ನಿತಿಶ್ ತಿವಾರಿ ದಕ್ಷಿಣದ ಹೀರೋಗಳ ಬಗ್ಗೆ ಒಲವು ತೋರಿ, ಇಲ್ಲಿನ ಕಲಾವಿದರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಕೂಡ ಈ ಸಿನಿಮಾದಲ್ಲಿ ರಾವಣನ ಸಹೋದರನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾವಣನ ಸಹೋದರನಾಗಿ ವಿಜಯ್ ಸೇತುಪತಿ ನಟಿಸಿದರೆ, ಈ ಹಿಂದೆ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.
ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.
ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್ (Ranbir Kapoor) ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ (Sai Pallavi)ಅವರ ಪಾಲಾಗಿದೆ.