ಹೈದರಾಬಾದ್: ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದರು.
ಬುಧವಾರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಹಾರ ಭದ್ರತೆಗೆ ಉತ್ತೇಜನ ನೀಡಲು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಸಾಂವಿಧಾನಿಕ ಸುರಕ್ಷತೆ ಒದಗಿಸುವ `ಸಂಯೋಜಿತ ನೂತನ ಕೃಷಿ ನೀತಿ’ ರೂಪಿಸಲು ಶೀಘ್ರವೇ ಅರ್ಥಶಾಸ್ತ್ರಜ್ಞರು ಹಾಗೂ ರೈತ ಮುಖಂಡರ ಸಭೆ ಕರೆಯುವುದಾಗಿಯೂ ಅವರು ಹೇಳಿದರು. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!
ತೆಲಂಗಾಣ ರಾಷ್ಟ್ರೀಯ ಸಮಿತಿ (TRS) ಸರ್ಕಾರವು ರೈತರ ಉತ್ಪನ್ನಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ನೆನಪಿಸಲು ಪ್ರಯತ್ನಿಸಿದೆ. ಏಕೆಂದರೆ, ನರೇಂದ್ರ ಮೋದಿ ಸರ್ಕಾರವು ಕಾರ್ಪೋರೇಟ್ಗಳು ಹಾಗೂ ಬ್ಯಾಂಕುಗಳಿಗೆ ವಂಚಿಸಿದವರ 10.50 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಆದರೆ ಒಂದು ರಾಜ್ಯದ ರೈತರ ಹಿತದೃಷ್ಟಿಯಿಂದ 3,500 ಕೋಟಿ ರೂ. ಹಣವನ್ನು ಭರಿಸಲು ಕೇಂದ್ರ ಸಿದ್ಧವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆಲಂಗಾಣದಲ್ಲಿ ರಬಿ ಹಂಗಾಮಿನಲ್ಲಿ ಉತ್ಪಾದಿತವಾದ ಭತ್ತವನ್ನು ಬೇಸಿಗೆಯಲ್ಲಿ ಕೊಯ್ಲು ಮಾಡುವುದರಿಂದ ಕಡಿಮೆ ಪ್ರಮಾಣದ ಅಕ್ಕಿಯ ಉತ್ಪಾದನೆಯಾಗಿದ್ದು 3,500 ಕೋಟಿ ನಷ್ಟವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕನಿಕರವಿಲ್ಲ. ಆದರೆ ನಮ್ಮ ಸರ್ಕಾರ ರೈತರನ್ನು ಕಂಗಾಲಾಗಲು ಬಿಡುವುದಿಲ್ಲ. ಇಂದಿನಿಂದಲೇ ಎಲ್ಲ ಗ್ರಾಮಗಳಲ್ಲೂ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕೆಜಿಗೆ 350ರೂ. ದಾಟಿದ ನಿಂಬೆಹಣ್ಣಿನ ಬೆಲೆ – ಜನ ಸಾಮಾನ್ಯರು ತತ್ತರ
ಬಿಜೆಪಿ ಕೇಂದ್ರ ಸರ್ಕಾರ ದೇಶಕ್ಕೆ ಹಲವು ರೀತಿಯಲ್ಲಿ ನೋವುಂಟು ಮಾಡಿದೆ, ಕೋಮುವಾದವನ್ನು ಪ್ರಚೋದಿಸುತ್ತಿದೆ ಎಂದು ಬುದ್ಧಿಜೀವಿಗಳು ಅಭಿಪ್ರಾಯಪಟ್ಟಿದ್ದಾರೆ. ಬೆಲೆ ಏರಿಕೆ ಮತ್ತು ಇತರ ನಕಾರಾತ್ಮಕ ಅಂಶಗಳ ನಡುವೆಯೂ ರಾಜಕೀಯ ಲಾಭಕ್ಕಾಗಿ `ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಬಳಸಿಕೊಂಡಿದೆ ಎಂದು ಕಿಡಿಕಾರಿದರು.