ಬೆಂಗಳೂರು: ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ ಎಂದು ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿ ವಿದ್ಯಾರ್ಥಿಯೋರ್ವ ಚಾಲಕನಿಗೆ ಅವಾಜ್ ಹಾಕಿ, ಚಾಲಕನ ಸೀಟಿನ ಮೇಲೆ ಹತ್ತಿ ಹಲ್ಲೆಗೆ ಮುಂದಾದ ಘಟನೆ ಕನಕಪುರದಲ್ಲಿ ನಡೆದಿದೆ.
ವೀಲಿಂಗ್ ಮಾಡಿ ಕೀಟಲೆ ಕೊಡ್ತಿದ್ದ ವಿದ್ಯಾರ್ಥಿಯ ಬೈಕ್ ಅನ್ನು ಕೆಎಸ್ಆರ್ಟಿಸಿ ಬಸ್ ಓವರ್ ಟೇಕ್ ಮಾಡಿ ಮುಂದಕ್ಕೆ ಸಾಗಿತ್ತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿ ಬಸ್ ಅಡ್ಡಗಟ್ಟಿ, ಬಸ್ ಹತ್ತಿ ಚಾಲಕನ ಜೊತೆಗೆ ಜಗಳ ಮಾಡಿದ್ದಲ್ಲದೆ ಆತನ ಮೇಲೆ ಹಲ್ಲೆ ನಡೆಸೋದಕ್ಕೆ ಮುಂದಾಗಿದ್ದಾನೆ.
ಈ ವೇಳೆ ಬಾ ಪೊಲೀಸರ ಬಳಿ ಮಾತನಾಡು ನೀನು ಎಂದು ಚಾಲಕ ಬಸ್ ಚಲಾಯಿಸಿದ್ದು, ಚಾಲಕನ ಸೀಟ್ ಬಳಿಯ ಕಿಟಕಿ ತೆಗೆದು ವಿದ್ಯಾರ್ಥಿ ಬಸ್ನಿಂದ ಜಿಗಿದಿದ್ದಾನೆ. ಬಳಿಕ ಬಸ್ಸಿನ ಫೋಟೋ, ವಿಡಿಯೋ ತೆಗೆದುಕೊಂಡು ಬಸ್ ಗಾಜು ಒಡೆಯಲು ಮುಂದಾಗಿದ್ದಾನೆ. ವಿದ್ಯಾರ್ಥಿಯ ರಂಪಾಟಕ್ಕೆ ರಸ್ತೆಯ ಮಧ್ಯೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ಪ್ರಯಾಣಿಕರು ಹಾಗೂ ಇತರೆ ವಾಹನ ಸವಾರರು ವಿದ್ಯಾರ್ಥಿಯನ್ನು ಎಷ್ಟೇ ಸಮಾಧಾನ ಮಾಡಿದರೂ ಆತ ಮಾತ್ರ ಯಾರ ಮಾತನ್ನು ಕೇಳದೆ ಗಲಾಟೆ ಮಾಡಿದ್ದಾನೆ.
ಕೇವಲ ಬಸ್ ಚಾಲಕನಿಗೆ ಮಾತ್ರವಲ್ಲದೆ ಸಿಕ್ಕ ಸಿಕ್ಕವರಿಗೆ ಅವಾಜ್ ಹಾಕಿ ಹೊಡೆಯೋದಕ್ಕೆ ಮುಂದಾಗಿದ್ದಾನೆ. ಕಿರಿಕ್ ವಿದ್ಯಾರ್ಥಿ ರಂಪಾಟ ನೋಡಲು ಆಗದೇ ಕೊನೆಗೆ ಬೇರೆ ದಾರಿ ಕಾಣದ ಬಸ್ ಚಾಲಕ ಪೊಲೀಸರಿಗೆ ಈತನ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ಈ ದೃಶ್ಯವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.