ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಮುಗನೂರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ ಹಾಗೂ ಮಗ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಮುಗನೂರ ಗ್ರಾಮದ ಭದ್ರಸ್ವಾಮಿ (32) ಹಾಗೂ ಸದಾಶಿವ ಸ್ವಾಮಿ (10) ಎಂದು ಗುರುತಿಸಲಾಗಿದೆ.
ನಿನ್ನೆ ಎಮ್ಮೆ ಮೇಯಿಸಲು ತೆರಳಿದ್ದ ಭದ್ರಸ್ವಾಮಿ ಮತ್ತು ಸದಾಶಿವ ಸ್ವಾಮಿ ಸಂಜೆ ವೇಳೆಗೆ ಮನೆಗೆ ವಾಪಸ್ಸಾಗಿರಲಿಲ್ಲ. ಆದರೆ, ಅವರು ಮೇಯಿಸಲು ಕರೆದೊಯ್ದ ಎಮ್ಮೆಗಳು ಮಾತ್ರ ಗ್ರಾಮಕ್ಕೆ ಮರಳಿದ್ದರಿಂದ ಕುಟುಂಬಸ್ಥರಿಗೆ ಅನುಮಾನ ಉಂಟಾಗಿದೆ.
ತಕ್ಷಣ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಹುಡುಕಾಟ ನಡೆಸಿದ ವೇಳೆ ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡದ ಬಳಿ ಅವರ ಬಟ್ಟೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸತತ ಕಾರ್ಯಾಚರಣೆ ನಡೆಸಿದ ಅವರು ಕೃಷಿ ಹೊಂಡದಿಂದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ.
ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
