– ಭಾರತ ಹಿಂದೂ ರಾಷ್ಟ್ರ ಆಗಲು ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಮಾಜಿ ಸಿಎಂ ಗುಡುಗು
ಬೆಂಗಳೂರು: ಇವತ್ತು ನಾನೇ ಕೊನೆಯ ಭಾಷಣಕಾರ. ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದು ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ (B.K.Hariprasad) ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹರಿಪ್ರಸಾದ್ ಹೋರಾಟ ಮಾಡ್ತಾರೆ. ಅವರ ಪ್ರಯತ್ನವನ್ನು ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಇಲ್ಲಿವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಿದ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾನು ವಿರೋಧ ಪಕ್ಷದ ನಾಯಕನಾಗಿ, ಸಿಎಂ ಆಗಿ ರಾಜ್ಯದ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ. ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಐದು ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್ಎಸ್ಎಸ್ನವ್ರು ಪುಕ್ಕಲರು, ಅವರಿಗೆ ಧೈರ್ಯ ಇಲ್ಲ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಗ್ಯಾರಂಟಿ ಜಾರಿ ಮಾಡಿದ್ರೆ ಖಜಾನೆ ಖಾಲಿಯಾಗುತ್ತೆ ಅಂತ ವಿರೋಧ ಪಕ್ಷದವರು ಟೀಕೆ ಮಾಡ್ತಿದ್ರು. ಇದಕ್ಕೆಲ್ಲಾ ಗಮನ ಕೊಡದೆ ಎಲ್ಲಾ ಗ್ಯಾರಂಟಿ, ಭರವಸೆಗಳನ್ನ ಈಡೇರಿಸಿದ್ದೇವೆ. ಡಿಕೆ ಶಿವಕುಮಾರ್ ಅವರು ಹೆಗಲು ಕೊಟ್ಟು ದುಡಿದಿದ್ದಾರೆ. ನಾವು ಅನೇಕ ಹೋರಾಟಗಳನ್ನ ಮಾಡಿ ಪಕ್ಷ ಸಂಘಟನೆ ಮಾಡಿ. 2023 ರಲ್ಲಿ ಶಿವಕುಮಾರ್ ಅಧ್ಯಕ್ಷರಾಗಿ, ನಾನು ವಿರೋಧ ಪಕ್ಷದ ನಾಯಕನಾಗಿ 134 ಸ್ಥಾನ ಗೆದ್ದಿದ್ವು. ಇದಕ್ಕೆ ನೀವೆಲ್ಲಾ ಕಾರಣ ಎಂದು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಹರಿಪ್ರಸಾದ್ ಅವರನ್ನ ಅಧ್ಯಕ್ಷರಾಗಿ ಮಾಡಿದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ, ಸುರ್ಜೆವಾಲಗೆ ಧನ್ಯವಾದಗಳು. ಹರಿಪ್ರಸಾದ್ ಕೆಳಹಂತದಿಂದ ಬಂದವರು. 5 ದಶಕಗಳ ಕಾರ್ಯಕರ್ತರಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿ ನಾಯಕರಾಗಿ, ಯುವ ಕಾಂಗ್ರೆಸ್ ನಾಯಕರಾಗಿ ಅನೇಕ ರಾಜ್ಯಗಳಲ್ಲಿ ಉಸ್ತುವಾರಿ ವಹಿಸಿಕೊಂಡು, ಸೇವಾದಳದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಜವಾಬ್ದಾರಿ ಹೊತ್ತುಕೊಳ್ಳಬೇಕಾದ್ರೆ ನಿಷ್ಠೆ ಸಿದ್ಧಾಂತಕ್ಕೆ ಬದ್ಧತೆ ಇದೆ. ನನಗೆ ವಿಶ್ವಾಸ ಇದೆ, ಹರಿಪ್ರಸಾದ್ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಕಾಂಗ್ರೆಸ್ನ ಮೂಲಸಿದ್ಧಾಂತ ಸಂವಿಧಾನದ ಆಶಯವನ್ನು ಜಾರಿ ಮಾಡುವ ಕೆಲಸ ಮಾಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ದೇಶವನ್ನ ಹಾಳು ಮಾಡ್ತಿದೆ. ಅನೇಕ ಸಂಸ್ಕೃತಿಗಳನ್ನ ಹೊಂದಿರುವ ದೇಶ ಭಾರತ. ಬಹುತ್ವ ಕಾಪಾಡಿಕೊಳ್ಳುವ ಗೌರವ ಕೊಡಬೇಕು. ಬಿಜೆಪಿಯವರು ಜಾತಿ ಧರ್ಮದ ಹೆಸರಲ್ಲಿ ದೇಶವನ್ನ ಒಡೆಯುವ ಕೆಲಸ ಮಾಡ್ತಿದ್ದಾರೆ. ಇದು ಹರಿಪ್ರಸಾದ್ಗೆ, ಕಾರ್ಯಕರ್ತರಿಗೆ ಸವಾಲು. ಕಾಂಗ್ರೆಸ್ನ ಇತಿಹಾಸ ಗೊತ್ತಿಲ್ಲಾ, ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಪಾತ್ರ ಏನು ಅಂತ ಗೊತ್ತಿಲ್ಲದವರು ಇದ್ದಾರೆ. ಕಾರ್ಯಕರ್ತರು ಹರಿಪ್ರಸಾದ್ ಜೊತೆ ನಿಲ್ಲಬೇಕು. ಜಿಲ್ಲಾ, ತಾಲ್ಲೂಕು, ಬೂತ್ ಮಟ್ಟದಲ್ಲಿ ಶಿಬಿರ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭಿಸುತ್ತೇವೆ: ಡಿ.ಕೆ ಶಿವಕುಮಾರ್
ಬಿಜೆಪಿ ಆರ್ಎಸ್ಎಸ್ನವರು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಆದರೆ, ಹಿಂದೂ ರಾಷ್ಟ್ರ ಆಗಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರ ಆಗಲು ನಮ್ಮ ಕಾರ್ಯಕರ್ತರು ಬಿಡಬಾರದು. ಇದು ಬಹುತ್ವದ ರಾಷ್ಟ್ರ. ಅನೇಕ ಜನ ಸೆಕ್ಯುಲರಿಸಂ ಮೇಲೆ ನಂಬಿಕೆ ಇಲ್ಲದವರು ಇದ್ದಾರೆ. ಅವರೆಲ್ಲರ ವಿರುದ್ಧ ಹರಿಪ್ರಸಾದ್ ಹೋರಾಟ ಮಾಡ್ತಾರೆ. ಬಿಜೆಪಿ ಆರ್ಎಸ್ಎಸ್ ಕೋಮುವಾದಿಗಳ ವಿರುದ್ಧವಾಗಿ ಹೋರಾಟ ಮಾಡ್ತಾರೆ. ಮುಂದೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
