ಬೆಂಗಳೂರು: ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ಮೀಟೂ ವಿವಾದದ ಬಳಿಕ ಟ್ವಿಟ್ಟರ್ ನಿಂದ ದೂರ ಉಳಿದಿದ್ದರು. 7 ತಿಂಗಳ ಬಳಿಕ ಮತ್ತೆ ಟ್ವಿಟ್ಟರ್ಗೆ ಎಂಟ್ರಿ ಕೊಟ್ಟಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ತಮ್ಮದೆಯಾದ ಹೆಜ್ಜೆ ಮೂಡಿಸಿದ್ದ ಶ್ರುತಿ ಹರಿಹರನ್ ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ದಕ್ಷಿಣ ಭಾರತದಲ್ಲಿ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯಾರಾಗಿದ್ದ ಶ್ರುತಿ, ಕೊನೆಯದಾಗಿ ನವೆಂಬರ್ ತಿಂಗಳಿನಲ್ಲಿ ಮೀಟೂ ಬಗ್ಗೆಯೇ ಒಂದು ಟ್ವೀಟ್ ಮಾಡಿ ಶ್ರುತಿ ಸುಮ್ಮನಾಗಿದ್ದರು.
ಇತ್ತೀಚೆಗೆ ತೆರೆಕಂಡ ತಮ್ಮ `ನಾತಿಚರಾಮಿ’ ಸಿನಿಮಾ ಬಗ್ಗೆ ಹಾಗೂ ಕೆಲವು ಸಣ್ಣ ಪುಟ್ಟ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟು ಬಿಟ್ಟರೆ ಇನ್ನು ಯಾವುದರ ಬಗ್ಗೆಯೂ ಅವರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.
ಆದರೆ, ಇದೀಗ 7 ತಿಂಗಳುಗಳ ಬಳಿಕ ಮತ್ತೆ ಟ್ವಿಟ್ಟರ್ ನಲ್ಲಿ ಶ್ರುತಿ ಹರಿಹರನ್ ಪ್ರತ್ಯಕ್ಷರಾಗಿದ್ದಾರೆ. ಇಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು, ಈ ಬಗ್ಗೆ ಶ್ರುತಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ನಲ್ಲಿ ಏನಿದೆ?
ಒಬ್ಬ ಲೆಜೆಂಡ್ರನ್ನು ಕಳೆದುಕೊಂಡ ನೋವನ್ನು ಹಂಚಿಕೊಳ್ಳಲು ಬಹಳ ಕಾಲದ ಬಳಿಕ ಸಾಮಾಜಿಕ ಜಾಲತಾಣಕ್ಕೆ ಬರುತ್ತಿದ್ದೇನೆ. ಇಂತಹ ಅದ್ಭುತ ವ್ಯಕ್ತಿಯ ಜೊತೆಗೆ ಕೆಲಸ ಮಾಡುವ ಅವಕಾಶ ಒಮ್ಮೆ ನನಗೆ ಸಿಕ್ಕಿತ್ತು. ಅವರ ಸರಳತೆ ಹಾಗೂ ಜ್ಞಾನ ವಿಸ್ಮಯವಾದದ್ದು, ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ ಎಂದು ಟ್ವೀಟ್ ಮಾಡಿ ನೆನೆದಿದ್ದಾರೆ.
Taking to social media after ages only to express my grief of losing a true legend. A man, I had the good fortune of meeting and working with just once.His simplicity and intelligence leaves you in awe. He remains immortal and in our hearts. #RIPGirishKarnad sir????
— sruthihariharan (@sruthihariharan) June 10, 2019
ಗಿರೀಶ್ ಕಾರ್ನಾಡ್ ಅವರ ಜೊತೆಗೆ ಕನ್ನಡದ ಇಂದಿನ ಯುವ ನಟಿಯರಿಗೆ ನಟಿಸುವ ಅವಕಾಶ ಸಿಕ್ಕಿದ್ದು ಕಡಿಮೆ. ಆದರೆ ಇಂತಹ ಅದ್ಭುತ ನಟನ ಜೊತೆಗೆ ಶ್ರುತಿ ಹರಿಹರನ್ ಅವರಿಗೆ ಒಮ್ಮೆ ನಟಿಸುವ ಭಾಗ್ಯ ಸಿಕ್ಕಿತ್ತು. ಜಾಕಬ್ ವರ್ಗಿಸ್ ನಿರ್ದೇಶನದಲ್ಲಿ ಮೂಡಿಬಂದಿದ್ದ `ಸವಾರಿ 2′ ಸಿನಿಮಾದಲ್ಲಿ ಕಾರ್ನಾಡರ ಜೊತೆಗೆ ಶ್ರುತಿ ನಟಿಸಿದ್ದರು.