ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿ ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿಗೂ ಅಸಾಮಾಧನ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಜವಾಬ್ದಾರಿ ಮರೆತಿದ್ದೀರಿ. ಅಲ್ಲದೆ ನೀವು ಕೆಲವೇ ಕೆಲವು ಹಿಂಬಾಲಕ ನಾಯಕರಾಗಿ ವರ್ತಿಸುತ್ತಿದ್ದೀರಿ. ಸಮ್ಮಿಶ್ರ ಸರ್ಕಾರಕ್ಕೆ ನಿಮ್ಮ ಸಹಕಾರ ಹಾಗೂ ನೆರವು ಅತ್ಯಗತ್ಯ ಇದೆ. ಇನ್ನಾದರೂ, ನೀವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಂದು ಸಿದ್ದರಾಮಯ್ಯಗೆ ಬರೆದಿರುವ ಪತ್ರದಲ್ಲಿ ಸ್ಪೀಕರ್ ರಮೇಶ್ಕುಮಾರ್ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ: 20 ತಿಂಗ್ಳ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಿದ ನಾಯಕರು ನೀವೇನಾ – ಸಿಎಂಗೆ ಖಾರವಾದ ಪತ್ರ ಬರೆದ ಸ್ಪೀಕರ್
- Advertisement 2
- Advertisement 3
ಪತ್ರದಲ್ಲಿ ಏನಿದೆ?
ರಾಜ್ಯ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ತಾವು ಕಳೆದ ಒಂದು ವರ್ಷದಿಂದ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ. ಯಾವುದೇ ಪೂರ್ವಗ್ರಹ ಪೀಡಿತರಾಗದೇ, ಪ್ರಾಮಾಣಿಕವಾಗಿ ನನ್ನ ಅನಿಸಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನೀವು ಶಾಸಕಾಂಗ ಪಕ್ಷದ ನಾಯಕನಂತೆ ನಡೆದುಕೊಳ್ಳದೆ ಕೆಲವೇ ಕೆಲವು ತಮ್ಮ ಆಪ್ತ ಶಾಸಕರ ಪಾಲಿನ ನಾಯಕನಂತೆ ನಡೆದುಕೊಳ್ಳುತ್ತಿದ್ದೀರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
- Advertisement 4
ತಾವು ಹಾಗೇ ನಡೆದುಕೊಳ್ಳುತ್ತಿದ್ದೀರೋ ಅಥವಾ ತಮ್ಮ ಸುತ್ತಲಿನ ಆಪ್ತ ವಲಯ ಹಾಗೆ ಬಿಂಬಿಸುತ್ತಿದೆಯೋ ಗೊತ್ತಿಲ್ಲ. ಎರಡೆರಡು ಬಾರಿ ಉಪ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರವಾದ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ತಮಗಿದೆ. ಸಮ್ಮಿಶ್ರ ಸರ್ಕಾರದಂತಹ ಸಂಕಷ್ಟದ ಸ್ಥಿತಿಯಲ್ಲಿ ಹೇಗೆ ನಡೆದುಕೊಂಡರೆ ಉತ್ತಮ ಎಂಬ ತಿಳುವಳಿಕೆಯು ತಮಗಿದೆ.
ಈ ಸಂದರ್ಭದಲ್ಲಿ ಸರ್ಕಾರಕ್ಕೆ ಹಾಗೂ ತಮ್ಮ ಪಕ್ಷಕ್ಕೆ ತಮ್ಮ ಅನುಭವದ ಅವಶ್ಯಕತೆ ದೊಡ್ಡ ಮಟ್ಟದಲ್ಲಿ ಬೇಕಿದೆ ಎನ್ನುವುದು ನನ್ನ ಅಭಿಪ್ರಾಯ. ಎಲ್ಲಾ ಕಾಂಗ್ರೆಸ್ ಶಾಸಕರ ನಾಯಕನಾಗಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಬಹು ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ. ಅವೆಲ್ಲವನ್ನು ನಿರ್ವಹಿಸುವ ಮಹತ್ತರ ಜವಾಬ್ದಾರಿ ತಮ್ಮ ಮೇಲಿದ್ದು ಅದನ್ನ ಯಶಸ್ವಿಯಾಗಿ ನಿರ್ವಹಿಸಬಲ್ಲಿರಿ ಎಂಬುದು ನನ್ನ ನಂಬಿಕೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.