ಚೆನ್ನೈ: ನಟ ಶಿವರಾಜ್ಕುಮಾರ್, ಗೀತಾ ದಂಪತಿ ಚೆನ್ನೈಗೆ ತೆರಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಆಗಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಚೆನ್ನೈನಲ್ಲಿ ಇರುವ ಸ್ಟಾಲಿನ್ ಅವರ ನಿವಾಸದಲ್ಲಿ ಈ ಭೇಟಿ ನಡೆದಿದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಭೇಟಿಯ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಎಂ.ಕೆ. ಸ್ಟಾಲಿನ್ ಅವರ ಜೊತೆ ಶಿವರಾಜ್ಕುಮಾರ್ ಮತ್ತು ಗೀತಾ ಅವರು ನಿಂತಿರುವ ಫೋಟೋ ಸಹ ಲಭ್ಯವಾಗಿದೆ.
ಪುನೀತ್ ರಾಜ್ಕುಮಾರ್ ನಿಧನರಾದಾದ ಎಂ.ಕೆ. ಸ್ಟಾಲಿನ್ ಅವರು ಪತ್ರದ ಮುಖಾಂತರ ಅಣ್ಣಾವ್ರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಈಗ ಅವರನ್ನು ಶಿವಣ್ಣ ಮತ್ತು ಗೀತಾ ಭೇಟಿ ಆಗಿರುವುದು ಯಾಕೆ ಎಂಬ ಕೌತುಕ ಪ್ರಶ್ನೆ ಮೂಡಿದೆ. ಡಾ. ರಾಜ್ಕುಮಾರ್ ಕುಟುಂಬಕ್ಕೂ ಚೆನ್ನೈಗೂ ಮೊದಲಿನಿಂದಲೂ ನಂಟು ಇದೆ. ಅಲ್ಲದೇ ಬೇರೆ, ಬೇರೆ ರಾಜ್ಯಗಳ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಕೂಡ ಈ ಕುಟುಂಬದ ಜೊತೆ ಒಡನಾಟ ಹೊಂದಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ಬಳಿಕ ಡಾ. ರಾಜ್ಕುಮಾರ್ ಕುಟುಂಬ ನೋವಿನಲ್ಲಿದೆ. ಅದರ ನಡುವೆಯೂ ಜೀವನ ಮುಂದುವರಿಯಲೇ ಬೇಕಾದ ಅನಿವಾರ್ಯತೆ ಇದೆ. ಸಿನಿಮಾ ಕೆಲಸಗಳಲ್ಲಿ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಬ್ಯುಸಿ ಆಗಿದ್ದಾರೆ. ಗೀತಾ ಶಿವರಾಜ್ಕುಮಾರ್ ಶಕ್ತಿಧಾಮದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪ್ರೊಡಕ್ಷನ್ಸ್, ಪಿಆರ್ಕೆ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.