ಶಿವಮೊಗ್ಗ: ಪ್ರೀತಿಸಿ ಮದುವೆ ಆದ ನವ ದಂಪತಿಗೆ ಪೋಷಕರ ಜೊತೆ ಸೇರಿ ಪೊಲೀಸರೇ ಕಿರುಕುಳ ನೀಡುತ್ತಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಆತ ಹೂ ಮಾರುವ ಹುಡುಗ. ಈಕೆ ಡಿಗ್ರಿ ಮುಗಿಸಿದ ಯುವತಿ. ಇವರಿಬ್ಬರೂ ಪ್ರೀತಿಸಿ ಇದೇ ತಿಂಗಳ 3 ರಂದು ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಆಗಿದ್ದಾರೆ. ಈಗ ಇವರಿಬ್ಬರಿಗೆ ಮನೆಯವರೇ ಶತ್ರುವಾಗಿದ್ದಾರೆ. ಇವರಿಗೆ ಪೊಲೀಸರು ಸಾಥ್ ನೀಡಿ ಕಿರುಕುಳ ನೀಡುತ್ತಿದ್ದಾರೆ.
ಶಿವಮೊಗ್ಗದ ಸೀಗೆಹಟ್ಟಿಯ ಅರ್ಜುನ್ ಹಾಗೂ ಗಾಂಧಿ ಬಜಾರ್ ನ ನಮ್ರತಾ ದಂಪತಿ ಪೊಲೀಸರು ಹಾಗೂ ಮನೆಯವರ ಕಿರುಕುಳಕ್ಕೆ ಒಳಗಾದವರು. ಹೂ ಮಾರುವ ಹುಡುಗ ಎಂಬ ಕಾರಣಕ್ಕೆ ನಮ್ರತಾ ಮನೆಯವರು ಪೊಲೀಸರ ಮೂಲಕ ಕಿರುಕುಳ ನೀಡುತ್ತಿದ್ದಾರೆ.
ಶಿವಮೊಗ್ಗದ ಡಿವೈಎಸ್ಪಿ ಇವರನ್ನು ಠಾಣೆಗೆ ಕರೆಸಿಕೊಂಡು ನಮ್ರತಾಳಿಂದ ಆಸ್ತಿ ಬೇಡ ಎಂದು ಪತ್ರ ಬರೆಸಿಕೊಂಡಿದ್ದಾರೆ. ಅರ್ಜುನ್ ಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ರಕ್ಷಣೆ ಕೊಡಬೇಕಾದ ಪೊಲೀಸರೇ ಹೀಗೆ ತೊಂದರೆ ಕೊಟ್ಟರೆ ನಮ್ಮ ಗತಿ ಏನು ಎಂದು ನವ ದಂಪತಿ ಹೇಳುತ್ತಿದ್ದಾರೆ.