ರಾಯಚೂರು: ಕೋಮುಗಲಭೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ರಕ್ಷಣೆ ಕೊಡುವುದಿಲ್ಲ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಭಾವೈಕ್ಯತೆ ನಾಡು. ಕೋಮುಗಲಭೆ ಮಾಡುವ ಎಂಥಹದ್ದೇ ಶಕ್ತಿ ಇದ್ದರೂ ಅದನ್ನು ಮಟ್ಟ ಹಾಕುವ ಕೆಲಸ ಸರ್ಕಾರ ಮಾಡುತ್ತದೆ ಎಂದ ಅವರು, ಕೋಮು ಗಲಭೆ ಆದರೆ ಬಿಜೆಪಿಗೆ ಲಾಭ ಆಗುತ್ತದೆ ಎಂದು ಹೇಳಿದ್ದ ಈಶ್ವರ ಖಂಡ್ರೆಗೆ ತಿರುಗೇಟು ನೀಡಿದರು. ರಾಜಕಾರಣವನ್ನು ಚುನಾವಣೆ ಸಂದರ್ಭದಲ್ಲಿ ಮಾಡಲಿ ಈಗಲ್ಲ ಎಂದರು.
ಜನರ ಮಧ್ಯೆ ಈ ರೀತಿಯ ಕೋಮು ಸಂಘರ್ಷ ಹಚ್ಚುವುದು ಸರಿಯಾದದ್ದಲ್ಲ. ಅವರು ಒಂದು ಪಕ್ಷದಲ್ಲಿದ್ದಾರೆ. ನಾವೊಂದು ಪಕ್ಷದಲ್ಲಿದ್ದೇವೆ. ಚುನಾವಣೆ ಬಂದಾಗ ರಾಜಕೀಯ ಮಾಡಲಿ, ರಾಜ್ಯ ಮತ್ತು ದೇಶದ ಶಾಂತಿಯಿಂದ ಇರಬೇಕು ಎನ್ನುವುದನ್ನು ಬಯಸುತ್ತೇವೆ. ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: CFI, PFI ಸಂಘಟನೆಗಳೇ ಮಕ್ಕಳ ಭವಿಷ್ಯ ಹಾಳಾಗೋದಕ್ಕೆ ಕಾರಣ: ಬಿ.ಸಿ.ನಾಗೇಶ್
ಕೋಮುಗಲಭೆಗೆ ಕಾರಣರಾದವರ ಮೇಲೆ ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿ ತರಲು ಸರ್ಕಾರ ಮುಂದಾಗಿದೆಯಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮುಖ್ಯಮಂತ್ರಿಗಳು ಬಹಳ ತಿಳುವಳಿಕೆ ಇರುವಂತರು. ಮುಖ್ಯಮಂತ್ರಿಗಳು ತುಂಬಾ ಅನುಭವ ಇರುವಂತವರು. ಮುಖ್ಯಮಂತ್ರಿಗಳು ಒಂದು ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಮತ್ತು ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ: ಪ್ರವೀಣ್ ಸೂದ್