ಬೆಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಜಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಸಂಘಟನೆಯವರೇ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿ ಹಿಜಬ್ ವಿದ್ಯಾರ್ಥಿನಿರು ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಬಿ.ಸಿ. ನಾಗೇಶ್ ಅವರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದವರೇ ಮಕ್ಕಳನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲೂ ಹಿಜಬ್ ವಿದ್ಯಾರ್ಥಿನಿಯರ ಹೈಡ್ರಾಮಾ – ಮನೆಗೆ ನಡೆದ ವಿದ್ಯಾರ್ಥಿನಿಯರು
ಜನವರಿಯಿಂದ ಇಲ್ಲಿಯವರೆಗೂ ಆರು ಜನ ವಿದ್ಯಾರ್ಥಿಯರ ಮನವೊಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆವು. ಆದರೆ ನಾವು ಎಷ್ಟು ಮನವೊಲಿಸಲು ಪ್ರಯತ್ನಿಸಿದ್ದೇವೋ, ಅದಕ್ಕಿಂತ ಬೇರೆ ಸಂಘಟನೆಗಳು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಿದ್ಯಾರ್ಥಿನಿಯರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಕೂಡ ಹೊರಬರುತ್ತಿದೆ. ಆದರೆ ಇದೀಗ ನಾವು ಯೋಚಿಸುತ್ತಿರುವುದು 6 ಹೆಣ್ಣು ಮಕ್ಕಳ ಬಗ್ಗೆ ಅಲ್ಲ. ಸುಮಾರು 1 ಲಕ್ಷ ಮುಸ್ಲಿಂ ಸಮಾಜಕ್ಕೆ ಸೇರಿದ ಮಕ್ಕಳು ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ 82 ಸಾವಿರ ಜನ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ. ಇಷ್ಟು ಜನರಲ್ಲಿ ಆರು ಮಂದಿ ಪರೀಕ್ಷೆ ಬರೆಯುವುದಿಲ್ಲ ಎಂಬುವುದಕ್ಕಿಂತ 81,900ಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆಯಲು ಸಿದ್ದರಾಗಿದ್ದೇವೆ ಎಂಬುವುದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇಲ್ಲಿಯವರೆಗೂ ಸುಪ್ರೀಂ ಕೋರ್ಟ್ ಕೂಡ ಅವರ ವಾದಗಳಿಗೆ ಮನ್ನಣೆ ನೀಡಿಲ್ಲ. ಅಲ್ಲದೇ ಇಲಾಖೆಗಳು ತೆಗೆದುಕೊಂಡ ನಿರ್ಧಾರಗಳು ಸರಿಯಾದ ರೀತಿಯಲ್ಲಿದೆ ಎಂದು ಹೈಕೋರ್ಟ್ ತಿಳಿಸಿದೆ. ಹಿಜಬ್ ಎಂಬುವುದು ಮುಗಿದು ಹೋದಂತಹ ಸಮಸ್ಯೆ ಎಂದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ನವಾಬ್ ಮಲಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ
ಹಿಜಬ್ ಕೇವಲ ಭಾರತದಲ್ಲಿ ಮಾತ್ರ ಎದುರಿಸಲಾಗುತ್ತಿರುವ ಸಮಸ್ಯೆಯಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಇದೇ ರೀತಿ ಸಮಸ್ಯೆಗಳಿದ್ದು, ಎಲ್ಲಾ ದೇಶಗಳು ಧೈರ್ಯವಾಗಿ ಮುನ್ನುಗ್ಗುತ್ತಿದೆ. ಹಿಜಬ್ ಮತ್ತು ಬುರ್ಕಾವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಧರಿಸಬಾರದು ಎಂಬ ನಿರ್ಣಯಗಳನ್ನು ಅನೇಕ ದೇಶಗಳು ಕೈಗೊಳ್ಳಲಾಗಿದೆ. ದುಬೈ ಅಥವಾ ಸೌದಿಯಲ್ಲಿಯೋ ಈ ದೇಶದಲ್ಲಿ ಹಿಜಬ್ ಕಡ್ಡಾಯವಲ್ಲ ಎಂಬ ಬೋರ್ಡ್ ಕೂಡ ಹಾಕಲಾಗಿದೆ. ಇಷ್ಟರ ಮಟ್ಟಿಗೆ ಆ ಸಮಾಜದಲ್ಲಿ ಬದಲಾವಣೆಗಳಾಗುತ್ತಿದೆ ಎಂದು ತಿಳಿಸಿದರು.