ನಟಿ ಲೀಲಾವತಿ (Leelavathi) ಅವರಿಗೆ ಹಿರಿಯ ನಟ ದ್ವಾರಕೀಶ್ (Dwarakish) ಅಂತಿಮ ನಮನ ಸಲ್ಲಿಸಿದ್ದಾರೆ. ಲೀಲಾವತಿ ಅವರ ಜೊತೆ ನಾನು ಮಗನಾಗಿ ನಟಿಸಿದ್ದೇ ನನ್ನ ಭಾಗ್ಯ ಎಂದಿದ್ದಾರೆ. ವಿನೋದ್ರಾಜ್- ಲೀಲಾವತಿ ದೇವರು ಮಾಡಿಸಿದ ತಾಯಿ, ಮಗ ಎಂದು ಅವರ ಬಾಂಧವ್ಯದ ಬಗ್ಗೆ ದ್ವಾರಕೀಶ್ ಮಾತನಾಡಿದ್ದಾರೆ.
ಲೀಲಾವತಿ ಮಾಡಿದ ಪಾತ್ರವೆಲ್ಲವೂ ಶ್ರೇಷ್ಠ ಪಾತ್ರವಾಗಿದೆ. ನಾಯಕಿ ಪಾತ್ರವಲ್ಲ, ಪೋಷಕ ಪಾತ್ರದಲ್ಲೂ ಲೀಲಾವತಿ ಜೀವ ತುಂಬಿದ್ದಾರೆ. ಡಾ.ರಾಜ್ಕುಮಾರ್-ಲೀಲಾವತಿ ಜೋಡಿಯೆಂದರೆ ಅತ್ಯಂತ ಜನಪ್ರಿಯ ಜೋಡಿ. ಆ ಜೋಡಿಯ ಹಾಗೇ ಮತ್ತೆ ಸಿನಿಮಾಗಳು ಬರಲೇ ಇಲ್ಲ. 60ರ ದಶಕದಲ್ಲಿ ಅವರು ನಟಿಸಿದ ಸಿನಿಮಾವೆಲ್ಲವೂ ಯಶಸ್ವಿಯಾಗಿದೆ ಎಂದು ಮಾಧ್ಯಮಕ್ಕೆ ದ್ವಾರಕೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ಯಾ ರತ್ನ, ಮಲ್ಲಿ ಮದುವೆ, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಲೀಲಾವತಿ ನಟಿಸಿದ್ದಾರೆ. ಲೀಲಾವತಿ ಮಗನಾಗಿ ನಟಿಸಿದ್ದು ನನ್ನ ಭಾಗ್ಯ, ಅವರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಮೊದಲ ಸಿನಿಮಾ ‘ಡ್ಯಾನ್ಸ್ ರಾಜ ಡ್ಯಾನ್ಸ್’, ವಿನೋದ್ ರಾಜ್ ಜೊತೆ ಮಾಡಿದೆ. ‘ಕೃಷ್ಣ ನೀ ಕುಣಿದಾಗ’ ಎಂಬ ಸಿನಿಮಾದಲ್ಲಿ ನಟಿಸಿದ್ದೀನಿ. ಲೀಲಾವತಿ ಮತ್ತು ವಿನೋದ್ರಾಜ್ ದೇವರು ಮಾಡಿಸಿದ ತಾಯಿ, ಮಗ. ಇಬ್ಬರೂ ಜೊತೆಯಾಗಿಯೇ ಇರೋರು, ಒಬ್ಬರನ್ನ ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ ಎಂದು ದ್ವಾರಕೀಶ್ ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿನೋದ್ರಾಜ್ಗೆ ದೇವರು ಧೈರ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಎಸ್.ನಾರಾಯಣ್, ನಟಿ ಶ್ರುತಿ, ಸುಧಾರಾಣಿ, ಶ್ರೀನಾಥ್, ಪೂಜಾ ಗಾಂಧಿ, ಮಾಳವಿಕಾ ಅವಿನಾಶ್, ಉಪೇಂದ್ರ ಸೇರಿದಂತೆ ಹಲವರು ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇನ್ನೂ ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅವರ ಅಂತ್ಯ ಸಂಸ್ಕಾರ ಮಧ್ಯಾಹ್ನ 3:30ಕ್ಕೆ ನೆರವೇರಲಿದೆ. ಇದನ್ನೂ ಓದಿ:ಲೀಲಾವತಿ ಅಂತಿಮ ದರ್ಶನ ಪಡೆದ ಹಾಲಿ, ಮಾಜಿ ಸಿಎಂ
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.