ಕೋಲ್ಕತ್ತಾ: ಸಂದೇಶ್ಖಾಲಿ (Sandeshkhali) ಪ್ರಕರಣದ ಆರೋಪಿ ಶೇಖ್ ಷಹಜಹಾನ್ (Sheikh Shahjahan) ಪರ ವಕೀಲರಿಗೆ ಕೋಲ್ಕತ್ತಾ ಹೈಕೋರ್ಟ್ (Calcutta High Court) ಚಾಟಿ ಬೀಸಿದೆ. ಆರೋಪಿ ವಿರುದ್ಧದ ಜಾಮೀನು ಅರ್ಜಿ ವಿಚಾರಣೆ ವೇಳೆ, 43 ಪ್ರಕರಣಗಳು ನಿಮ್ಮನ್ನು 10 ವರ್ಷಗಳ ಕಾಲ ಬ್ಯುಸಿಯಾಗಿಡಲಿದೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಪರ ವಕೀಲ, ಜಾಮೀನು ಅರ್ಜಿ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ, ಆರೋಪಿ ವಿರುದ್ಧ ಸುಮಾರು 43 ಪ್ರಕರಣಗಳಿವೆ. ಈಗ ಮುಂದಿನ 10 ವರ್ಷಗಳವರೆಗೆ ಈ ವ್ಯಕ್ತಿ ನಿಮ್ಮನ್ನು ಕಾರ್ಯನಿರತವಾಗಿರಿಸಿಕೊಳ್ಳುತ್ತಾನೆ. ಮುಂದಿನ 10 ವರ್ಷಗಳವರೆಗೆ ನೀವು ಆತನ ಎಲ್ಲಾ ಪ್ರಕರಣಗಳನ್ನು ನಿಭಾಯಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಆರೋಪಿ ಬಗ್ಗೆ ಯಾವುದೇ ಸಹಾನುಭೂತಿಯನ್ನು ಹೊಂದಿಲ್ಲ. ನೀವು ಸೋಮವಾರ ಬನ್ನಿ ಎಂದು ವಕೀಲರಿಗೆ ಸೂಚಿಸಿದೆ.
ಪ್ರಕರಣದ ವಿಚಾರವಾಗಿ ಬುಧವಾರ ನ್ಯಾಯಾಲಯವು, 50 ದಿನಗಳಿಗಿಂತ ಹೆಚ್ಚು ಕಾಲ ಷಹಜಹಾನ್ನನ್ನು ಬಂಧಿಸಲು ವಿಫಲವಾಗಿದ್ದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇಷ್ಟು ದಿನ ಪರಾರಿಯಾಗಿರುವ ವ್ಯಕ್ತಿಯನ್ನು ಬಂಧಿಸದೇ ರಾಜ್ಯವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಪೀಠ ಎಚ್ಚರಿಸಿತ್ತು.
ಸಂದೇಶ್ಖಾಲಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪದ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ತೃಣಮೂಲ ಕಾಂಗ್ರೆಸ್ (Trinamool Congress) ನಾಯಕ ಶೇಖ್ ಷಹಜಹಾನ್ನನ್ನು ಬುಧವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು 10 ದಿನಗಳ ಕಸ್ಟಡಿಗೆ ನೀಡಲಾಗಿದೆ.