ಬೆಂಗಳೂರು: ಕಲಾವಿದರ ಬದುಕು ಹೇಗೆ ಅಂತ ಹೇಳೋಕೆ ಆಗಲ್ಲ. ಹೀಗಾಗಿ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪುನೀತ್ ರಾಜ್ ಕುಮಾರ್ ಅವರು ಹೇಳುತ್ತಿದ್ದರು ಎಂದು ನಟ ಚಿಕ್ಕಣ್ಣ ಗದ್ಗದಿತರಾದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಪ್ಪು ನೆನೆದು ಭಾವುಕರಾದರು. 5 ಸಿನಿಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದೆ ಎಂದು ಹೇಳುತ್ತಾ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭೇಟಿಯಾದ ಮೊದಲ ಪರಿಚಯದ ದಿನಗಳನ್ನ ನೆನಪಿಸಿಕೊಳ್ಳುತ್ತಾ ಕಣ್ಣೀರು ಹಾಕಿದರು.
ಜೇಮ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಹಲವು ದಿನಗಳು ಜೊತೆಯಾಗಿ ಕೆಲಸ ಮಾಡಿದ್ದೆವು. ಸದಾಶಿವನಗರದ ಸುತ್ತಮುತ್ತ ಶೂಟಿಂಗ್ ಮಾಡಿದ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ವರ್ಷ 4 ಸಿನಿಮಾ ನಿರ್ಮಾಣ ಮಾಡಬೇಕು ಅಂತ ಪ್ಲಾನ್ ಮಾಡಿದ್ದರು ಎಂದು ಚಿಕ್ಕಣ್ಣ ಹೇಳಿದರು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
ನನಗೆ ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಮೂರು ದಿನ ಕಥೆ ಬಗ್ಗೆ ಕೂಡ ಮಾತಾಡಿದ್ದೆವು. ಕಲಾವಿದರ ಬದುಕು ಹೇಗೆ ಅಂತ ಹೇಳಕ್ಕೆ ಆಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪ್ರತಿ ಬಾರಿಯೂ ಹೇಳುತ್ತಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡು ಬೇಸರ ವ್ಯಕ್ತಪಡಿಸಿದರು.
ಫಿಟ್ ನೆಸ್ ಬಗ್ಗೆ ಅಪ್ಪು ಬಹಳ ಚರ್ಚೆ ಮಾಡುತ್ತಿದ್ದರು. ಈಗ ಅವರಿಲ್ಲ ಅನ್ನೋದನ್ನ ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಣ್ಣ ಅತ್ತುಬಿಟ್ಟರು. ಇದನ್ನೂ ಓದಿ: ನವೆಂಬರ್ 16ರಂದು ಪವರ್ ಸ್ಟಾರ್ಗೆ ಸ್ಯಾಂಡಲ್ವುಡ್ ನುಡಿನಮನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 10 ದಿನಗಳೇ ಕಳೆದಿವೆ. ಆದರೂ ಇಂದಿಗೂ ಅವರ ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳ ಸಾಗರವೇ ಹರಿದಬರುತ್ತಿದೆ. ಈ ಮಧ್ಯೆ ಇಂದು ರಾಜ್ಯದ ಎಲ್ಲಾ ಥಿಯೇಟರ್ ಗಳಲ್ಲಿಯೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ 11 ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ನೆರವೇರಿಸಲಿದ್ದಾರೆ.