ಬೆಳಗಾವಿ: 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಾನಂದ ನೀಲಣ್ಣವರ್(Shivanand Neelannavar) ಅವರನ್ನು ಬೆಳಗಾವಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 10 ದಿನ ಸಿಐಡಿ (CID) ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿ ಶಿವಾನಂದ ನೀಲಣ್ಣವರ್ ಅವರನ್ನು ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿರುವ ಹಿನ್ನೆಲೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸಿಐಡಿ ಡಿವೈಎಸ್ಪಿ ಕೋದಂಡರಾಮ ನೇತೃತ್ವದ ತಂಡ ನ್ಯಾಯಾಲಯಕ್ಕೆ ಆಗಮಿಸಿ, 14 ದಿನಗಳ ಕಸ್ಟಡಿಗೆ ನೀಡುವಂತೆ ಅರ್ಜಿ ಸಲ್ಲಿಸಿತು. ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶ ಗಂಗಾಧರ ಕೆ.ಎನ್ ಅವರು ಆರೋಪಿ ಶಿವಾನಂದ ನೀಲಣ್ಣವರ್ ಅವರನ್ನು 10 ದಿನ ಸಿಐಡಿ ಕಸ್ಟಡಿಗೆ ನೀಡಿದರು.
ವಿಚಾರಣೆ ವೇಳೆ ನ್ಯಾಯಾಧೀಶರು ಆರೋಪಿಯ ಆರೋಗ್ಯದ ಬಗ್ಗೆ ಪ್ರಶ್ನಿಸಿದಾಗ, ತನಗೆ ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಸಮಸ್ಯೆ ಇದೆ ಎಂದು ನೀಲಣ್ಣವರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಂಬಂಧಪಟ್ಟ ವೈದ್ಯರಿಂದ ಚಿಕಿತ್ಸೆ ಹಾಗೂ ಮಾತ್ರೆಗಳ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ 35 ಸಾವಿರ ಜನರಿಗೆ ಹಣ ಬೇಡ, ನಾನು ಬೇಕಾಗಿದ್ದೇನೆ ಎಂದು ಶಿವಾನಂದ ನೀಲಣ್ಣವರ್ ಹೇಳಿಕೊಂಡರು. ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಅಮಾಯಕ ಜನರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿಯಂತೆ ಕೆಲಸ ಮಾಡಿ ಅವರ ರಕ್ಷಣೆ ಮಾಡಬೇಕು. ನೀವು ಜನರಿಗೆ ಒಳ್ಳೆಯದು ಮಾಡಿರಬಹುದು, ಆದರೆ ಅಮಾಯಕ ಜನರ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ 4,500 ಕೋಟಿ ವಂಚನೆ ಆರೋಪ ಕೇಸ್; ಶಿವಾನಂದ್ ನೀಲಣ್ಣವರ್ ಬಂಧನ
ಸಾಕಷ್ಟು ಜನ ಹಣ ಪಡೆದು ಮೋಸ ಮಾಡಿ ಓಡಿ ಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಇಂತಹ ಘಟನೆ ತಡೆಯಲು ಈ ಕಾನೂನು ತರಲಾಗಿದೆ. ಕಾನೂನಿನ ಅಡಿಯಲ್ಲಿ ನೀವು ಏನು ಮಾಡಿದ್ದೀರೋ ಅದು ಉಳಿಯುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಇದೇ ವೇಳೆ ಧರ್ಮೋ ರಕ್ಷತಿ ರಕ್ಷಿತಃ ಎಂಬ ಶ್ಲೋಕದ ಉದಾಹರಣೆಯನ್ನು ನೀಡಿದರು.
ಇನ್ನೊಂದೆಡೆ, ಹೂಡಿಕೆದಾರರ ಹಣವನ್ನು ಮರಳಿಸಲು ಸಿದ್ಧರಿದ್ದೇವೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದರು. ಆದರೆ, ಈ ವಿಷಯ ಈಗ ನನ್ನ ಮುಂದೆ ಇಲ್ಲ, ಇದರ ಬಗ್ಗೆ ಈಗ ಮಾತನಾಡಬಾರದು ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ, ಆರೋಪಿ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಣ್ಣೀರಿಟ್ಟ ಶಿವಾನಂದ
ಕೋರ್ಟ್ ಹಾಲ್ನಿಂದ ಹೊರಬರುವಾಗ ಸಹೋದರನನ್ನು ಕಂಡ ಶಿವಾನಂದ ನೀಲಣ್ಣವರ್ ಕಣ್ಣೀರಿಟ್ಟು, ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಭಾವುಕರಾದರು.
ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದಾಖಲಾಗಿರುವ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣವನ್ನು ಇದೀಗ ಸಿಐಡಿ ತನಿಖೆ ನಡೆಸುತ್ತಿದೆ. ಸಾವಿರಾರು ಕೋಟಿ ಹಣ ಎಲ್ಲಿ ಹೂಡಿಕೆಯಾಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದ್ದು, ಈಗಾಗಲೇ ಹಲವು ದಾಖಲೆಗಳನ್ನು ಪೊಲೀಸರು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಮತ್ತೊಂದೆಡೆ, ಅಕ್ಯೂಮೆನ್ ಆಪ್ನ ಡೇಟಾ ಅಳಿಸಲು ಯತ್ನಿಸಿದ ಆರೋಪದಲ್ಲಿ ಮಹಾರಾಷ್ಟ್ರ ಮೂಲದ ಓಂಕಾರ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಶಿವಾನಂದ ನೀಲಣ್ಣವರ್ ಪತ್ನಿಯ ಮೂರು ಖಾತೆಗಳು ಸೇರಿ 20ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸಿಐಡಿ ಫ್ರೀಜ್ ಮಾಡಿದೆ.

