• ಎಸ್ಐಆರ್ ಗಂಭೀರವಾಗಿ ತೊಡಗಿಸಿಕೊಳ್ಳಲು ತೀರ್ಮಾನ
• ಚುನಾವಣಾ ಆಯುಕ್ತರಿಗೆ ಸೋಮವಾರ ಮತ್ತೆ ದೂರು
ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯು ಇಂದು ಸುಮಾರು ಎರಡೂವರೆ ಗಂಟೆ ಕಾಲ ನಡೆದಿದೆ. ಕಾಂಗ್ರೆಸ್ ಸರಕಾರವು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿಷಯದಲ್ಲಿ ಇಡೀ ವ್ಯವಸ್ಥೆಯನ್ನ ಹಾಳು ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ತಿಳಿಸಿದರು.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪಕ್ಷದ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಸೇರಿದಂತೆ ಇತರ ಎಲ್ಲ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು ಎಂದು ವಿವರಿಸಿದರು.

ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಚರ್ಚೆ:
ಎಸ್ಐಆರ್ ಅನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಎಸ್ಐಆರ್ ವ್ಯವಸ್ಥಿತವಾಗಿ ಆಗಬೇಕು. ನಮ್ಮ ಕಾರ್ಯಕರ್ತರು ಇನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಬಹಳಷ್ಟು ಚರ್ಚೆಗಳಾಗಿವೆ. ಪ್ರತಿಯೊಬ್ಬ ಕೋರ್ ಕಮಿಟಿ ಸದಸ್ಯರಿಗೆ ಒಂದೊಂದು ವಿಭಾಗವನ್ನ ಹಂಚಿದ್ದೇವೆ ಎಂದು ವಿವರಿಸಿದರು.
ಸೋಮವಾರ ಚುನಾವಣಾ ಆಯುಕ್ತರಿಗೆ ದೂರು..
ಒಂದೊಂದು ವಿಭಾಗಕ್ಕೆ ಮೂರು ಜಿಲ್ಲೆಗಳು ಬರುತ್ತವೆ. ಆ ವಿಭಾಗಕ್ಕೆ ಕೋರ್ ಕಮಿಟಿ ಸದಸ್ಯರು (Core Committee) ಪ್ರವಾಸ ಮಾಡಬೇಕು. ಶಾಸಕರು, ಮಾಜಿ ಶಾಸಕರನ್ನು ಭೇಟಿ ಮಾಡಿ, ಇನ್ನೂ ಚುರುಕಾಗಿ ಅದನ್ನು ಕೈಗೆತ್ತಿಕೊಳ್ಳಬೇಕು. ಪ್ರವಾಸ ಮಾಡಬೇಕೆಂಬ ನಿರ್ಧಾರ ಆಗಿದೆ. ಸೋಮವಾರ (ಜು.6) ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಜೀ ಅವರ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಪಕ್ಷದ ಇತರ ಪ್ರಮುಖರು ಚುನಾವಣಾ ಆಯುಕ್ತರನ್ನ ಭೇಟಿ ಮಾಡಿ ನಮ್ಮ ಸಮಸ್ಯೆಗಳು, ರಾಜ್ಯದಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಲಿದ್ದಾರೆ ಎಂದರು.
ಹಿರಿಯೂರು ಕ್ಷೇತ್ರ ಗೆಲ್ಲಲು ಕಾರ್ಯತಂತ್ರ
2ನೇ ಪ್ರಮುಖ ವಿಚಾರವೆಂದರೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ. ಅದರ ಬಗ್ಗೆಯೂ ಚರ್ಚೆ ಆಗಿದೆ. ಹಿರಿಯರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಸಿ.ಟಿ ರವಿ ಅವರು ಜೆಡಿಎಸ್ನ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಹಿರಿಯೂರು ಕ್ಷೇತ್ರ ಗೆಲ್ಲಲು ಕಾರ್ಯತಂತ್ರ ರೂಪಿಸಲು ಜವಾಬ್ದಾರಿ ನೀಡಿದ್ದೇವೆ ಎಂದು ತಿಳಿಸಿದರು.
ಎಂಎಲ್ಸಿ ಚುನಾವಣೆ- ತಂಡ ರಚನೆ
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ವಿಧಾನಪರಿಷತ್ (ಎಂಎಲ್ಸಿ) ಚುನಾವಣೆಗಳು ಮುಂದಿನ ಅಕ್ಟೋಬರ್ನಲ್ಲಿ ಬರಲಿವೆ. ಎರಡೂ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಇದಕ್ಕೂ ಚುರುಕು ಮುಟ್ಟಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ತಂಡ ಮಾಡಿದ್ದೇವೆ ಎಂದು ವಿವರ ನೀಡಿದರು. ಈ ತಂಡ ಪ್ರವಾಸ ಮಾಡಬೇಕೆಂದು ತೀರ್ಮಾನ ಆಗಿದೆ ಎಂದು ಹೇಳಿದರು.
ಪಕ್ಷಕ್ಕೆ ಮುಜುಗರ ತಂದರೆ ನೋಟಿಸ್
ಇದೆಲ್ಲದರ ಜೊತೆಗೆ ಪ್ರಮುಖವಾಗಿ ಪಕ್ಷದಲ್ಲಿ ಕೆಲವು ಮುಖಂಡರು ಪದೇ ಪದೇ ಹೇಳಿಕೆ ಕೊಟ್ಟು ಪಕ್ಷಕ್ಕೆ ಮುಜುಗರ ಉಂಟು ಮಾಡುವ ಸಂದರ್ಭ ಸೃಷ್ಟಿ ಆಗುತ್ತಿದ್ದು, ಇದೆಲ್ಲದಕ್ಕೂ ಇತಿಶ್ರೀ ಹಾಕಬೇಕು. ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂಬ ವಿಚಾರ ಗಂಭೀರವಾಗಿ ಚರ್ಚೆ ಆಗಿದೆ. ಮಾಧ್ಯಮಗಳ ಮುಂದೆ ಹೋಗಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವವರಿಗೆ ನೋಟಿಸ್ ಕೊಟ್ಟು ವಿವರ ಪಡೆಯಲು ಹಾಗೂ ಇವೆಲ್ಲಕ್ಕೂ ಇತಿಶ್ರೀ ಹಾಕಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
