ನವದೆಹಲಿ: ಕರ್ನಾಟಕದ ಬೌಲರ್ ಗಳ ಅಬ್ಬರದ ಬೌಲಿಂಗ್ ದಾಳಿಗೆ ಕುಸಿದು ರೈಲ್ವೇಸ್ ತಂಡ ಶರಣಾಗಿದೆ. ದೆಹಲಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ಕೊನೆ ದಿನ ಆರ್ಭಟದ ಬೌಲಿಂಗ್ ಮಾಡಿದ ಕರ್ನಾಟಕ ಗೆಲುವಿನ ನಗೆ ಬೀರಿದೆ.
ಮೂರನೇ ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡ 199 ರನ್ ಗಳಿಸಿದ್ದ ಕರ್ನಾಟಕ 4 ನೇ ದಿನ ಕೇವಲ 12 ರನ್ ಸೇರಿಸಿ ಆಲೌಟ್ ಆಯ್ತು. ಮೊದಲ ಇನ್ನಿಂಗ್ಸ್ ನಲ್ಲಿ 29 ರನ್ ಮುನ್ನಡೆ ಪಡೆಯಿತು. ಬಹುತೇಕ ಈ ಪಂದ್ಯ ಡ್ರಾ ಆಗಬಹುದು ಅಂತ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಕೊನೆಯ ದಿನ ಕರ್ನಾಟಕದ ಬೌಲರ್ ಗಳು ಮ್ಯಾಜಿಕ್ ಮಾಡಿ ಗೆಲುವಿಗೆ ಕಾರಣರಾದರು.
29 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡ ಕರ್ನಾಟಕದ ಬೌಲರ್ ಗಳ ದಾಳಿಗೆ ತರಗೆಲೆಗಳಂತೆ ಉದುರಿ ಹೋದ್ರು. ರೋನಿತ್ ಮೋರೆ ಹಾಗೂ ಅಭಿಮನ್ಯು ಮಿಥುನ್ ಮಾರಕ ದಾಳಿಗೆ ರೈಲ್ವೇಸ್ ಬ್ಯಾಟ್ಸ್ ಮನ್ ಗಳು ತತ್ತರಿಸಿ ಹೋದರು. ಪರಿಣಾಮ ಎರಡನೇ ಇನ್ನಿಂಗ್ಸ್ ನಲ್ಲಿ ರೈಲ್ವೇಸ್ ಕೇವಲ 79 ರನ್ ಗಳಿಗೆ ಸರ್ವಪತನ ಕಂಡಿತು.
ಕರ್ನಾಟಕದ ಪರ ರೋನಿತ್ ಮೋರೆ 11 ಓವರ್ ಮಾಡಿ 32 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ 9 ಓವರ್ ಗೆ 17 ರನ್ ನೀಡಿ 3 ವಿಕೆಟ್ ಪಡೆದು ರೇಲ್ವೇಸ್ ಗೆ ದುಸ್ವಪ್ನರಾದ್ರು. ರೇಲ್ವೇಸ್ ಪರ ಎಂ ದೇವ್ ಧರ್ 38 ರನ್(82 ಎಸೆತ, 6 ಬೌಂಡರಿ) ಬಿಟ್ಟರೆ ಇನ್ಯಾವ ಬ್ಯಾಟ್ಸ್ ಮನ್ ಗಳು ಎರಡಂಕಿ ದಾಟಲು ವಿಫಲರಾದ್ರು.
51 ರನ್ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ಕೇವಲ 8.2 ಓವರ್ ಗಳಲ್ಲಿ ವಿಕೆಟ್ ನಷ್ಟ ಇಲ್ಲದೆ ಗುರಿ ಮುಟ್ಟಿತು. ರೋಹನ್ ಕದಂ 27 ರನ್(31 ಎಸೆತ, 4 ಬೌಂಡರಿ) ಹಾಗೂ ದೇವದತ್ ಪಡಿಕ್ಕಲ್ 24 ರನ್ ( 19 ಎಸೆತ, 3 ಬೌಂಡರಿ) ಗಳಿಸಿ ಕರ್ನಾಟಕವನ್ನ ಗೆಲುವಿನ ಗುರಿ ಮುಟ್ಟಿಸಿದ್ರು. ಈ ಗೆಲುವಿನೊಂದಿಗೆ ಕರ್ನಾಟಕ 7 ಅಂಕ ಪಡೆದು ನಾಕೌಟ್ ಹಾದಿ ಸುಗಮ ಮಾಡಿಕೊಳ್ತು.
ಸ್ಕೋರ್ ವಿವರ
ರೈಲ್ವೇಸ್
ಮೊದಲ ಇನ್ನಿಂಗ್ಸ್ 182/10
ಎರಡನೇ ಇನ್ನಿಂಗ್ಸ್ 79/10
ಕರ್ನಾಟಕ
ಮೊದಲ ಇನ್ನಿಂಗ್ಸ್ 211/10
ಎರಡನೇ ಇನ್ನಿಂಗ್ಸ್ 51/0