ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೊಂಡಿಹಾಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನಿನಲ್ಲಿ ದನಗಳನ್ನು ಮೇಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಜಮೀನಿನ ಮಾಲೀಕನನ್ನೇ ಕೊಲೆ ಮಾಡಲಾಗಿದೆ. 45 ವರ್ಷದ ಯಂಕಪ್ಪ ಕೊಲೆಯಾದ ವ್ಯಕ್ತಿ.
ರಾಡ್, ಕಲ್ಲು, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಯಂಕಪ್ಪನ ಕಬ್ಬಿನ ಗದ್ದೆಯಲ್ಲಿ ಗ್ರಾಮದ ನಿಂಗಪ್ಪ ದನಗಳನ್ನು ಮೇಯಿಸಿದ್ದಕ್ಕೆ ಜಗಳವಾಗಿತ್ತು. ಯಂಕಪ್ಪ ನಿಂಗಪ್ಪನಿಗೆ ಹೊಡೆದಿದ್ದ, ಇದಕ್ಕೆ ಪ್ರತಿಯಾಗಿ ನಿಂಗಪ್ಪ ನಾಲ್ಕೈದು ಜನರೊಂದಿಗೆ ಮನೆಗೆ ಬಂದು ಯಂಕಪ್ಪನಿಗೆ ಥಳಿಸಿ ಹೋಗಿದ್ದನು.
ಇದಾದ ಬಳಿಕ ಜಗಳ ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೆ ನಿನ್ನೆ ಯಂಕಪ್ಪನನ್ನ ಜಮೀನಿನಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಗ್ರಾಮದ ನಿಂಗಪ್ಪ, ಆದನಗೌಡ, ಶರಣಗೌಡ, ಮಹಾಂತಗೌಡ, ಹನುಮಂತ, ಭೀಮನಗೌಡ ಕೊಲೆ ಮಾಡಿದ್ದಾರೆ ಅಂತ ಮೃತ ಯಂಕಪ್ಪನ ಕುಟುಂಬದವರು ಆರೋಪಿಸಿದ್ದಾರೆ.
ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.