ರಾಯಚೂರು: ಬೆಂಗಳೂರಿನ ಯಲಹಂಕದಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ರಾಯಚೂರಿನ ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ವಿಭಾಗದ ಶ್ವಾನದಳದ ‘ಸಿರಿ’ ಹೆಸರಿನ ಶ್ವಾನ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.
ಈ ಶ್ವಾನ ಅಪರಾಧ ಪತ್ತೆ ಹಚ್ಚುವಲ್ಲಿ ಚಾಣಾಕ್ಷತೆ ಮೆರದು ಪ್ರಥಮ ಸ್ಥಾನಗಳಿಸಿದೆ. ಬೆಂಗಳೂರಿನ ಆಡುಗೋಡಿ ತರಬೇತಿ ಶಾಲೆಯಲ್ಲಿ 9 ತಿಂಗಳ ಕಾಲ ಕಠಿಣ ತರಬೇತಿಯನ್ನು ಪಡೆದಿರುವ ಸಿರಿ ರಾಷ್ಟ್ರದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.
ಸಿರಿ ಶ್ವಾನವನ್ನು ನಿರ್ವಹಣೆ ಮಾಡುವ ಪೊಲೀಸ್ ಪೇದೆಗಳಾದ ಜಯಕುಮಾರ್ ಹಾಗೂ ಶರಣಬಸವ ಕೆಲಸಕ್ಕೆ ಪ್ರಶಂಸೆ ನೀಡಲಾಗಿದೆ. ಇದೇ ವೇಳೆ ರಾಯಚೂರಿನ 12 ಜನ ಪೊಲೀಸರು ಸಹ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಪಡೆದಿದ್ದಾರೆ. ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಹಿರಿಯ ಅಧಿಕಾರಿಗಳು ಇಂದು ಸನ್ಮಾನಿಸಿದರು.