ರಾಯಚೂರು: ಮೋದಿ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ರಾಯಚೂರು (Raichur) ನಗರ ಬಿಜೆಪಿ ಶಾಸಕ (BJP MLA) ಡಾ. ಶಿವರಾಜ್ ಪಾಟೀಲ್ (Shivaraj Patil) ಆಡಿಯೋ (Audio) ಈಗ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಶಾಸಕರು ಮತ್ತೊಮ್ಮೆ ವಿವಾದಾತ್ಮಕ ಮಾತುಗಳ ಮೂಲಕ ಸುದ್ದಿಯಲ್ಲಿದ್ದಾರೆ.
ಈಗ ಪ್ರಧಾನಿ ಮೋದಿ, ಶ್ರೀರಾಮುಲು ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿವೆ. ನಾನೇ ಮೋದಿ ನಾನೇ ದೇವರು. ಯಾವ ಮೋದಿ ಇಲ್ಲಾ ಪಾದಿ ಇಲ್ಲ. ನಾನು ಯಾರನ್ನೂ ಕೇರ್ ಮಾಡಲ್ಲ. ಸಿಂಗಲ್ ಮ್ಯಾನ್ ಆರ್ಮಿ ನಾನು. ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನೂ ಕೂಡ ನಾನು ಕೇರ್ ಮಾಡಲ್ಲ ಎಂದಿರುವ ಶಿವರಾಜ್ ಪಾಟೀಲ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಏಮ್ಸ್ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಜೊತೆ ಮಾತನಾಡಿದ್ದ 3 ನಿಮಿಷ 19 ಸೆಕೆಂಡುಗಳ ಆಡಿಯೋ ನಾಲ್ಕೂವರೆ ವರ್ಷದ ಬಳಿಕ ಈಗ ವೈರಲ್ ಆಗಿದೆ.
ಸೋತರೂ ಚಿಂತೆಯಿಲ್ಲಾ, ಗೆದ್ದರೂ ಚಿಂತೆಯಿಲ್ಲಾ, ಎದ್ದರೂ ಚಿಂತೆಯಿಲ್ಲಾ, ಮಲ್ಕೊಂಡರೂ ಚಿಂತೆಯಿಲ್ಲಾ ನನಗೆ. ಚಿಂತೆಯಿಲ್ಲದಿರುವ ಮನುಷ್ಯ ನಾನು. ನಾನೇ ದೇವರು ಎಲ್ಲರೂ ನನ್ನ ಕಾಲಿಗೆ ನಮಸ್ಕಾರ ಮಾಡಬೇಕು. ನಾನು ಯಾರನ್ನೂ ಕೇರ್ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು
ನನಗೆ ಯಾವ ರೈಟ್ ಇಲ್ಲಾ ಲೆಫ್ಟ್ ಇಲ್ಲಾ. ಸಿಂಗಲ್ ಮ್ಯಾನ್ ಆರ್ಮಿ ನಾನು. ನನ್ನ ಕೈ, ನನ್ನ ಕಾಲು, ಯಾವ ಮೋದಿ ಇಲ್ಲಾ, ಅವನ್ಯಾರು ಟ್ರಂಪ್ ಇಲ್ಲಾ. ಯಾವ ಬದನೆಕಾಯಿ ಸಹ ಕೇಳಂಗಿಲ್ಲ. ನಾನೇ ದೇವರು. ನಾನೇ ಎಲ್ಲಾ. ನಾನಿದ್ರೆ ಜಗತ್ತು. ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಬಗ್ಗೆ ನನ್ನ ಮುಂದೆ ಹೇಳಿದ್ರೆ ಹೇಗೆ ಎಂದು ಮಾತನಾಡಿದ್ದಾರೆ.
ಆಡಿಯೋ ವೈರಲ್ ಆಗಿರುವುದು ಬಿಜೆಪಿ ಪಾಳಯದಲ್ಲಿ ಇರುಸುಮುರುಸಿಗೆ ಕಾರಣವಾಗಿದ್ದರೆ, ಸಾರ್ವಜನಿಕ ವಲಯದಲ್ಲಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು