ದಾವಣಗೆರೆ: ಲಾಕ್ಡೌನ್ನಿಂದಾಗಿ ಅನಾರೋಗ್ಯಕ್ಕೆ ಓಳಗಾಗಿರುವ ಕೆಲವು ಔಷಧಿ ಸಿಗದೆ ಪರದಾಡುವಂತಾಗಿದೆ. ಇಂತಹದ್ದೇ ಸಮಸ್ಯೆಯ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಸಮಸ್ಯೆಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸ್ಪಂಧಿಸಿದ್ದಾರೆ.
ರಾಮನಗರದ ಬಿಡದಿಯಿಂದ ದಾವಣಗೆರೆಯ ಮಗಳ ಮನೆಗೆ ಹಬ್ಬಕ್ಕೆ ಬಂದಿದ್ದ ಮುನಿಯಮ್ಮ ಎಂಬವರು ಲಾಕ್ಡೌನ್ ಹಿನ್ನೆಲೆ ಮಗಳ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಆದರೆ ಮುನಿಯಮ್ಮ ಅವರ ಮಗ ಮುನಿರಾಜು ಚಿಕ್ಕಂದಿನಿಂದಲೇ ಅಂಗವಿಕಲ ಹಾಗೂ ಮಾನಸಿಕ ಅಸ್ಪಸ್ಥನಾಗಿದ್ದಾನೆ. ಹೀಗಾಗಿ ಮಗನಿಗೆ ನಿತ್ಯವೂ ಮಾತ್ರೆಗಳನ್ನು ನೀಡಬೇಕಾಗಿದೆ. ಆದರೆ ಲಾಕ್ಡೌನ್ ಹಿನ್ನೆಲೆ ಔಷಧಿ ಸಿಗದೆ ಮುನಿಯಮ್ಮ ಪರದಾಡುವಂತಾಗಿತ್ತು.
ಕೆಲವೊಂದು ಮಾತ್ರೆಗಳು ಕೇವಲ ನಿಮಾನ್ಸ್ನಲ್ಲಿ ಮಾತ್ರ ಸಿಗುತ್ತವೆ. ಎರಡು ದಿನಗಳಿಂದ ಮಾತ್ರೆಗಳು ಸಿಗದೆ, ತಮ್ಮ ಊರಿಗೆ ಹೋಗಲು ಸಾಧ್ಯವಾಗದೆ ಮುನಿಯಮ್ಮ ಕಣ್ಣೀರಿಟ್ಟಿದ್ದರು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದಕ್ಕೆ ಸ್ಪಂಧಿಸಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯುವಕನಿಗೆ ಬೇಕಾಗುವ ಔಷಧಿಗಳನ್ನು ನೀಡಿ ನೆರವಾಗಿದ್ದಾರೆ.
ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಬೇಕು ಎಂದು ತಿಳಿಸಿದ್ದಾರೆ. ಅದರಂತೆ ನೂರಾರು ಕುಟುಂಬಗಳ ನೆರವಿಗೆ ಯುವ ಮೋರ್ಚಾದ ಕಾರ್ಯಕರ್ತರು ನಿಂತಿದ್ದಾರೆ. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಔಷಧಿ ಒಗದಿಸಿ, ನಿಮ್ಮ ಜೊತೆ ನಾವು ಇದ್ದೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ.