-ನಾಳೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ
ಮೈಸೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ಹೋರಾಟ ತೀವ್ರಗೊಂಡಿದೆ. ಮೈಸೂರಿನ ಸುತ್ತೂರು ಮಠದಲ್ಲಿ ವೀರಶೈವ-ಲಿಂಗಾಯಿತ ಚಿಂತಕರ ಕಾರ್ಯಗಾರ ನಡೆದಿದೆ.
ಇದೇ ಮೊದಲ ಬಾರಿಗೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸುತ್ತೂರು ಮಠ ವೇದಿಕೆಯಾಗಿದೆ. ಹಲವು ದಿನದಿಂದ ಧರ್ಮ ಸ್ಥಾಪನೆ ವಿಚಾರದ ವಿವಾದದಿಂದ ದೂರ ಇದ್ದ ಶ್ರೀಮಠ ಹಾಗೂ ಸುತ್ತೂರು ಶ್ರೀಗಳು ಸಹ ಇದೇ ಮೊದಲ ಬಾರಿಗೆ ಈ ವಿಚಾರದ ಚರ್ಚೆಗೆ ಮಠದಲ್ಲೇ ವೇದಿಕೆ ಕಲ್ಪಿಸಿದ್ದಾರೆ. ಈ ಕಾರ್ಯಗಾರದಲ್ಲಿ 700ಕ್ಕು ಹೆಚ್ಚು ಮಂದಿ ಭಾಗಿಯಾಗಿದ್ದರು. ಸಮುದಾಯದ ಸಂಪನ್ಮೂಲಗಳ ವ್ಯಕ್ತಿಗಳೊಂದಿಗೆ ವಿಶೇಷ ಚರ್ಚೆ ಕೂಡ ನಡೆಯಿತು. ವೀರಶೈವ-ಲಿಂಗಾಯಿತ ಒಂದಾಗಿರಬೇಕೋ? ಅಥವಾ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸಲು ಹೋರಾಟ ನಡೆಸಬೇಕೋ ಎನ್ನುವುದರ ಬಗ್ಗೆ ಚರ್ಚೆ ನಡೆಯಿತು.
ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಮುದಾಯದ ಇತರೆ ಮಠಾಧಿಶರು ಕಾರ್ಯಾಗಾರದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಾಧ್ಯಮಗಳನ್ನು ಹೊರಗಿಟ್ಟು ನಡೆದ ಕಾರ್ಯಾಗಾರದಲ್ಲಿ ಅಂತಿಮವಾಗಿ ಯಾವ ನಿರ್ಣಾಯಕ್ಕೂ ಬಂದಿಲ್ಲ. ಬದಲಾಗಿ ಕೇವಲ ಚರ್ಚೆ ಮಾತ್ರ ನಡೆದಿದೆ. ಲಿಂಗಾಯತ ಸ್ವಾತಂತ್ರ್ಯ ಧರ್ಮ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಸುತ್ತೂರು ಮಠ ಈಗ ಇಂತಹ ಚರ್ಚೆಗೆ ವೇದಿಕೆ ಕಲ್ಪಿಸಿರುವುದು ತೀವ್ರ ಕೂತುಹಲ ಕೆರಳಿಸಿದೆ.
ಅತ್ತ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ ನಾಳೆ ಬೆಳಗಾವಿ ಚಲೋ ಮಹಾ ಜಾಥಾ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಸಾಧ್ಯತೆ ಇದೆ.