ಬೆಂಗಳೂರು: ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ವಾಹನ ಸವಾರನೊಬ್ಬ ತನ್ನ ಹೆಲ್ಮೆಟ್ ನಿಂದ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹಿತೇಂದ್ರ ಎಂ.ಎಸ್ ಹಲ್ಲೆಗೊಳಗಾದ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದು, ಇವರ ಮೇಲೆ ಸಂಜಯ್ ಎಂಬಾತ ಹಲ್ಲೆ ಮಾಡಿದ್ದಾನೆ. ಹಿತೇಂದ್ರ ಅವರು ಇಂದು ಕೋರಮಂಗಲ ಎನ್ ಜಿವಿ ಬಳಿ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಸವಾರ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾನೆ.
ಕೋರಮಂಗಲ ಎನ್ ಜಿವಿ ಬಳಿ ಹಿತೇಂದ್ರ ಅವರು ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ತನ್ನ ಸ್ನೇಹಿತೆಯ ಜೊತೆ ಬರುತ್ತಿದ್ದ ಬೈಕ್ ಸವಾರ ಜೋರಾಗಿ ಹಾರ್ನ್ ಮಾಡಿ, ಅಜಾಗರೂಕತೆಯಿಂದ ತನ್ನ ವಾಹನವನ್ನು ಚಲಾಯಿಸಿದ್ದಾನೆ. ಇದರಿಂದ ಗಾಬರಿಗೊಂಡ ಇನ್ಸ್ ಪೆಕ್ಟರ್ ಆತನನ್ನು ಪ್ರಶ್ನಿಸಿದ್ದಾರೆ. ಪರಿಣಾಮ ಸಿಟ್ಟುಗೊಂಡ ಸವಾರ, ಹಿತೇಂದ್ರ ಮೇಲೆ ಹೆಲ್ಮೆಟ್ ನಿಂದ ಹಲ್ಲೆಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ ಬೆದರಿಕೆ ಕೂಡ ಹಾಕಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಹಿತೇಂದ್ರ ಅವರು ಹಲ್ಲೆಕೋರ ಸಂಜಯ್ ಮತ್ತು ಆತನ ಸ್ನೇಹಿತೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.