ಚಿತ್ರದುರ್ಗ: ಪೊಲೀಸ್ ಪೇದೆ ಕರ್ತವ್ಯ ಮರೆತು ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಪಲ್ಲವಗೆರೆ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ರಾಜು ಚವ್ಹಾಣ್ ಅವರನ್ನು ಭರಮಸಾಗರದ ಚೆಕ್ ಪೋಸ್ಟ್ ಗೆ ಪರಿಶೀಲನೆಗಾಗಿ ಹಾಕಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆ 40 ದಿನಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಎಲ್ಲಡೆ ಮದ್ಯ ಮಾರಟಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ಫುಲ್ ಖುಷಿಯಾದ ಪೇದೆ ರಾಜು ಚವ್ಹಾಣ್ ಕರ್ತವ್ಯ ಮರೆತು ತಮ್ಮ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದಾರೆ.
ಲಾಕ್ಡೌನ್ ಸಡಲಿಕೆಯಿಂದಾಗಿ ನಿನ್ನೆ ಪಲ್ಲವಗೆರೆ ಗ್ರಾಮದ ಸುತ್ತ ಬೀಟ್ಗೆ ಹಾಕಲಾಗಿತ್ತು. ಅದರಂತೆ ಕರ್ತವ್ಯ ನಿರ್ವಹಿಸಲು ಹೋಗಿದ್ದ ರಾಜು ಈರುಳ್ಳಿ ಜಮೀನಿನ ಮರದ ಕೆಳಗೆ ಕುಳಿತು ಗ್ರಾಮದ ಸ್ನೇಹಿತರ ಜೊತೆ ಪೋಲಿಸ್ ಸಮವಸ್ತ್ರದಲ್ಲಿಯೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾರ್ಟಿಯಲ್ಲಿ ಕುಡಿದು ಅಲ್ಲಿನ ಯುವಕರಿಗೆ ಕಾನೂನಿನ ಪಾಠ ಮಾಡಿದ್ದಾರೆ. ನಿವೃತ್ತ ಯೋಧರಾಗಿರುವ ರಾಜು, 2017ರಲ್ಲಿ ಸೇನೆಯಿಂದ ಬಂದು ಪೊಲೀಸ್ ಇಲಾಖೆಗೆ ಸೇರಿದ್ದರು ಎಂದು ಹೇಳಲಾಗುತ್ತಿದೆ. ಇವರ ಕೃತ್ಯದಿಂದಾಗಿ ಖಡಕ್ ಪೊಲೀಸರಿಗೆ ಇರಿಸುಮುರಿಸು ಉಂಟಾಗಿದ್ದು, ರಾಜು ಅವರ ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿತನಕ್ಕೆ ಸಿಬ್ಬಂದಿ ತಲೆತಗ್ಗಿಸುವಂತಾಗಿದೆ. ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗ ಎಸ್ಪಿ ರಾಧಿಕಾ.ಜಿ ಪೇದೆ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲಾತಾಣಗಳಲ್ಲಿ ನಡೆದಿದೆ.