ಮಂಡ್ಯ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಮಂಡ್ಯದಲ್ಲಿ ನಡೆಯುತ್ತಿರುವ ʼಭಾರತ್ ಜೋಡೋ ಪಾದಯಾತ್ರೆʼ (Bharat Jodo Yatra) ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಸುದ್ದಿ ವರದಿ ಮಾಡುತ್ತಿದ್ದಾಗ ಪೊಲೀಸರು ಹಲ್ಲೆ ಮಾಡಿದ್ದಾರೆ. ವರದಿಗಾರರು, ಕ್ಯಾಮೆರಾಮ್ಯಾನ್ ಮೇಲೆ ಮಂಡ್ಯ (Mandya) ಜಿಲ್ಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್
ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಪೊಲೀಸರ ಗೂಂಡಾವರ್ತನೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಸೇರಿದಂತೆ ಅನೇಕ ಜನಪ್ರತಿನಿಧಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.
ಹಲ್ಲೆ ಬಗ್ಗೆ ಮಂಡ್ಯ ಎಸ್ಪಿ ಮಾತನಾಡಿ, ನೂಕಾಟದ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ನಮ್ಮ ಪೊಲೀಸರು ಬಿದ್ದಿದ್ದಾರೆ. ಈ ವೇಳೆ ನಾನು ಕೂಡ ಕೆಳಗೆ ಬಿದ್ದು, ಯೂನಿಫಾರ್ಮ್ನಲ್ಲಿದ್ದ ಹೆಸರಿನ ಪ್ಲೇಟ್ ಕೂಡ ಹರಿದಿದೆ. ನಮ್ಮ ಪೊಲೀಸರು ಹಲ್ಲೆ ನಡೆಸಿಲ್ಲ. ಸಾರ್ವಜನಿಕ ಸೇವೆ ಮಾಡುತ್ತಿರುವ ಪೊಲೀಸರು, ಪತ್ರಕರ್ತರು ಪರಸ್ಪರ ಸಹಕಾರದಿಂದಲೇ ಪಾದಯಾತ್ರೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹಾಗೇನಾದರೂ ನಮ್ಮ ಪೊಲೀಸರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರೆ, ವೀಡಿಯೋಗಳಿದ್ದರೆ ಸಾಕ್ಷಿಯನ್ನು ಪರಿಗಣಿಸಿ ಸಂಬಂಧಿತ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ
ಘಟನೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ, ಹಲ್ಲೆ ವಿಚಾರ ತಿಳಿದಿಲ್ಲ. ಸಂಬಂಧಪಟ್ಟವರಿಂದ ವಿವರಗಳನ್ನು ತರಿಸಿಕೊಂಡು ಪರಿಶೀಲಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಸದ್ಯ ಮಂಡ್ಯದಲ್ಲಿ ಸಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪುತ್ರ ರಾಹುಲ್ ಗಾಂಧಿ ಸಾಥ್ ನೀಡಿದರು.