ದಾವಣಗೆರೆ: ತಂದೆಯೊಬ್ಬ ಚಾಕ್ಲೇಟ್ ತರುವುದಾಗಿ ನಂಬಿಸಿ ತನ್ನ ಸ್ವಂತ ಮಗಳನ್ನು ಬಸ್ ನಲ್ಲೇ ಬಿಟ್ಟು ಹೋಗಿರುವ ಘಟನೆ ದಾವಣಗೆರೆ ನಗರದ ಭದ್ರಾ ಚಾನಲ್ ಬಳಿಯಲ್ಲಿ ನಡೆದಿದೆ.
ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಶಾನಭೋಗದಹಳ್ಳಿ ನಿವಾಸಿ ಸಯ್ಯದ್ ಈ ಕೃತ್ಯವೆಸಗಿದ ತಂದೆ. ತನ್ನ ಪತ್ನಿ ಫೌಜಿಯಾಗೆ ತಿಳಿಸದೆ ಸಯ್ಯದ್ ಮಗಳನ್ನು ಕರೆತಂದು ಬಸ್ನಲ್ಲಿ ಬಿಟ್ಟು ಹೋಗಿದ್ದ. ಆದರೆ ಬಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪುನಃ ಮಗು ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ.
ಏನಿದು ಘಟನೆ: ಮೊದಲಿನಿಂದಲೂ ತಂದೆ ಸೈಯದ್ ಗೆ ಹೆಣ್ಣು ಮಗು ಹುಟ್ಟಿದ್ದರಿಂದ ಅಸಮಾಧಾನವಿತ್ತು. ಹೀಗಾಗಿ ಪ್ರತಿನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಾಪಿ ತಂದೆ ಸೈಯದ್ ಗುರುವಾರ ರಾತ್ರಿ ಬೆಂಗಳೂರಿನಿಂದ ದಾವಣಗೆರೆಗೆ ಬಸ್ ಟಿಕೆಟ್ ಬುಕ್ ಮಾಡಿ 3 ವರ್ಷದ ಮಗುವನ್ನು ಸ್ಲೀಪರ್ ಕೋಚ್ ನಲ್ಲಿ ಮಲಗಿಸಿ ಚಾಕ್ಲೇಟ್ ತರುವುದಾಗಿ ನಂಬಿಸಿ ಬಿಟ್ಟು ಹೋಗಿದ್ದ. ಆದರೆ ಈ ವೇಳೆಗೆ ಬಸ್ ಬೆಂಗಳೂರು ಬಿಟ್ಟು ದಾವಣಗೆರೆ ಬಂದು ಸೇರಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ಕ್ಲೀನ್ ಮಾಡುವಾಗ ಮಗು ಇರುವುದು ಬೆಳಕಿಗೆ ಬಂದಿತ್ತು. ಮಗುವನ್ನು ಕಂಡು ಅಚ್ಚರಿಗೊಂಡ ಬಸ್ ಸಿಬ್ಬಂದಿ ಆ ಮಗುವಿನ ವಿಳಾಸ ತಿಳಿಯದೆ ಆತಂಕಕ್ಕೆ ಒಳಗಾಗಿದ್ದರು. ಅನಂತರ ಸಿಬ್ಬಂದಿ ಮಗುವಿಗೆ ತಿಂಡಿ ಕೊಡಿಸಿ ಆರೈಕೆ ಮಾಡಿದ್ದರು.
ವಿಳಾಸ ತಿಳಿದಿದ್ದು ಹೇಗೆ: ಮಗುವನ್ನ ಸಂತೈಸುವ ವೇಳೆ ಮಗವಿನ ಬಳಿ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಪಡೆದ ಬಸ್ ಸಿಬ್ಬಂದಿ ಮಗುವಿನ ತಾಯಿಗೆ ಮಾಹಿತಿ ನೀಡಿದ್ದಾರೆ. ಬಸ್ ಸಿಬ್ಬಂದಿಯಿಂದ ಮಾಹಿತಿ ಪಡೆದ ತಾಯಿ ಫೌಜಿಯಾ ತಕ್ಷಣ ಸ್ಥಳಕ್ಕೆ ಬಂದು ಮಗಳನ್ನು ಪಡೆದು ಬಸ್ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ.
ಘಟನೆಗೆ ಹಿಂದಿನ ದಿನ ಪತ್ನಿಯ ಜೊತೆ ಜಗಳ ಮಾಡಿದ್ದ ಸೈಯ್ಯದ್ ಯಾರಿಗೂ ಮಾಹಿತಿ ನೀಡದೆ ಮಗುವನ್ನ ಕರೆದುಕೊಂಡು ಹೋಗಿದ್ದ. ಮಗುವನ್ನು ಕರೆದುಕೊಂಡು ಹೋದ ಬಳಿಕ ಪತ್ನಿ ಫೌಜಿಯಾ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಬಸ್ ಚಾಲಕ ಗಣಪತಿ ಅವರು ಕರೆ ಮಾಡಿ ಮಗು ದಾವಣಗೆರೆಯಲ್ಲಿ ಇರುವುದನ್ನು ತಿಳಿಸಿದ್ದಾರೆ.