ನವದೆಹಲಿ: ಪದ್ಮಶ್ರೀ ಪುರಸ್ಕೃತ ಮತ್ತು ಭಾರತೀಯ ಬೆನ್ನುಮೂಳೆ ಗಾಯಗಳ ಕೇಂದ್ರದ ಮೇಜರ್ ಎಚ್ಪಿಎಸ್ ಅಹ್ಲುವಾಲಿಯಾ(85) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಎಚ್ಪಿಎಸ್ ಅಹ್ಲುವಾಲಿಯಾ ಅವರು ನಿವೃತ್ತ ಸೇನಾ ಅಧಿಕಾರಿಯಾಗಿದ್ದು, ತರಬೇತಿ ಪಡೆದ ಪರ್ವತಾರೋಹಿ, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅಹ್ಲುವಾಲಿಯಾ ಅವರು ಸಾಹಸ, ಕ್ರೀಡೆ, ಪರಿಸರ, ಅಂಗವೈಕಲ್ಯ ಮತ್ತು ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್ನಲ್ಲಿ ಬೆಂಕಿ
ವೃತ್ತಿಪರ ಪರ್ವತಾರೋಹಿಯಾಗಿರುವ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಆತ್ಮಕಥೆ ಹೈಯರ್ ದ್ಯಾನ್ ಎವರೆಸ್ಟ್ ಸೇರಿದಂತೆ 13 ಪುಸ್ತಕಗಳನ್ನು ಬರೆದಿದ್ದಾರೆ. ಮೇಜರ್ ಅಹ್ಲುವಾಲಿಯಾ ಅವರು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ ಮತ್ತು ದೆಹಲಿ ಪರ್ವತಾರೋಹಣ ಸಂಘದ ಮಾಜಿ ಅಧ್ಯಕ್ಷರೂ ಸಹ ಆಗಿದ್ದಾರೆ.
ಅಹ್ಲುವಾಲಿಯಾ ಅವರಿಗೆ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇದೀಗ ಪತ್ನಿ ಭೋಲಿ ಅಹ್ಲುವಾಲಿಯಾ ಮತ್ತು ಪುತ್ರಿ ಸುಗಂಧ್ ಅಹ್ಲುವಾಲಿಯಾ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್ಬ್ಯಾಗ್ ಕಡ್ಡಾಯ